ADVERTISEMENT

ಸುರಪುರ: ಕಾಯಂಗೆ ಆಗ್ರಹಿಸಿ ಅನಿರ್ದಿಷ್ಟ ಮುಷ್ಕರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 8:45 IST
Last Updated 17 ಅಕ್ಟೋಬರ್ 2012, 8:45 IST

ಸುರಪುರ: ಗ್ರಾಮೀಣ ಅಂಚೆ ನೌಕರರನ್ನು (ಜಿ.ಡಿ.ಎಸ್.) ಕಾಯಂಗೊಳಿಸುವಂತೆ ದೇಶಾದ್ಯಂತ ನಡೆಯುತ್ತಿರುವ ಅನಿರ್ದಿಷ್ಟ ಮುಷ್ಕರವನ್ನು ಮಂಗಳವಾರ ತಾಲ್ಲೂಕಿನ ಗ್ರಾಮೀಣ ಅಂಚೆ ನೌಕರರು ಇಲ್ಲಿನ ಅಂಚೆ ಕಚೇರಿಯ ಆವರಣದಲ್ಲಿ ಆರಂಭಿಸಿದರು.

ನೇತೃತ್ವ ವಹಿಸಿದ್ದ ಸಂಘದ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ತಡಿಬಿಡಿ ಮಾತನಾಡಿ, ಗ್ರಾಮೀಣ ಅಂಚೆ ನೌಕರರು ಅಂಚೆ ಇಲಾಖೆಯ ಆಧಾರಸ್ತಂಭಗಳಂತೆ ಸೇವೆ ಸಲ್ಲಿಸುತ್ತಿದ್ದಾರೆ. ದೂರದ ಊರುಗಳಿಂದ ಬರುವ ಅಂಚೆಯನ್ನು ಹಳ್ಳಿ ಹಳ್ಳಿಗಳಲ್ಲಿ ತಲುಪಿಸುತ್ತಿದ್ದಾರೆ. ಜೊತೆಗೆ ಸರ್ಕಾರದ ಮಾಸಾಶನಗಳನ್ನು ಫಲಾನುಭವಿಗಳಿಗೆ ಚಾಚು ತಪ್ಪದೆ ಮುಟ್ಟಿಸುತ್ತಿದ್ದಾರೆ.

ಅಂಚೆ ಇಲಾಖೆಯ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಆದರೂ ನಮ್ಮನ್ನು ಮಲತಾಯಿ ಮಕ್ಕಳಂತೆ ಕಾಣಲಾಗುತ್ತಿದೆ ಎಂದು ದೂರಿದರು.ಒಂದು ವೇಳೆ ಗ್ರಾಮೀಣ ಅಂಚೆ ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿದರೆ ಅಂಚೆ ವ್ಯವಸ್ಥೆಯೆ ಅಸ್ತವ್ಯಸ್ಥಗೊಳ್ಳುತ್ತದೆ. ಆದರೂ ನಮ್ಮ ಸೇವೆಯನ್ನು ಕಾಯಂಗೊಳಿಸದೆ ಇರುವುದು ದುರದೃಷ್ಟಕರ.

ಇದನ್ನು ಖಂಡಿಸಿ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದೇವೆ. ಇದಕ್ಕೂ ಜಗ್ಗದಿದ್ದರೆ ಉಗ್ರ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು. ಇಲಾಖೆ ನೌಕರರಿಗೆ ಕೊಡುವ ಬೋನಸ್ ಸೀಲಿಂಗ್ ಜಿ.ಡಿ.ಎಸ್. ನೌಕರರಿಗೂ ನೀಡಬೇಕು. ಅನುಕಂಪ ಆಧಾರದ ಮೇಲೆ ವಾರಸುದಾರರಿಗೆ ನೌಕರಿ ನೀಡಬೇಕು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಜಿ.ಡಿ.ಎಸ್. ನೌಕರರನ್ನು ನೇಮಿಸಬೇಕು. ತಡೆಹಿಡಿದ ವೇತನವನ್ನು ಪಾವತಿ ಮಾಡಬೇಕು ಇತರ ಬೇಡಿಕೆಗಳನ್ನು ನೌಕರರು ಮುಂದಿಟ್ಟಿದ್ದಾರೆ.

ದೊಡ್ಡಯ್ಯನಾಯಕ್, ನಾಗಪ್ಪ ಉಳ್ಳೆಸುಗೂರ, ಚನ್ನಯ್ಯಸ್ವಾಮಿ, ರಾಚಯ್ಯಸ್ವಾಮಿ, ರಾಯಪ್ಪ, ನೀಲಕಂಠರಾಯ ಪಾಟೀಲ, ಶರಣಯ್ಯ ಗುತ್ತೇದಾರ್, ಹಣಮಂತ್ರಾಯ ದೇವರಗೋನಾಲ, ದೇವಿಂದ್ರಪ್ಪ ಹುಣಸಿಹೊಳೆ, ಗುರುಸ್ವಾಮಿ ಅಮಲಿಹಾಳ, ಶ್ರೀನಿವಾಸ ರಂಗಂಪೇಟ, ದುರ್ಗಪ್ಪ ಆಲ್ದಾಳ, ಶಾಂತಯ್ಯಸ್ವಾಮಿ ಮಾಲಗತ್ತಿ, ಶಾಂತಗೌಡ ಬಾಚಿಮಟ್ಟಿ, ಮಲ್ಲನಗೌಡ ಶೆಳ್ಳಗಿ, ಹಣಮಂತ್ರಾಯಗೌಡ ಕೋನಾಳ, ಹಣಮಂತ್ರಾಯ ಕವಡಿಮಟ್ಟಿ, ಶಿವುಕುಮಾರ ಅಮ್ಮಾಪುರ, ಚಾಂದಪಟೇಲ ಕುಂಬಾರಪೇಟ, ಎಸ್.ಎ. ಮತೀನ ರುಕ್ಮಾಪುರ, ತಾಜುದ್ದೀನ್ ಪ್ರತಿಭಟನೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.