ADVERTISEMENT

ಸುರಪುರ: ರಾಜೂಗೌಡಗೆ ಭವ್ಯ ಸ್ವಾಗತ

ರಾಜಾ ವೆಂಕಟಪ್ಪನಾಯಕ ವಿರುದ್ಧ ರಾಜೂಗೌಡಗೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 16 ಮೇ 2018, 9:39 IST
Last Updated 16 ಮೇ 2018, 9:39 IST
ಸುರಪುರದಲ್ಲಿ ರಾಜೂಗೌಡ ಅವರಿಗೆ ಭವ್ಯ ಮೆರವಣಿಗೆಯ ಮೂಲಕ ಮಂಗಳವಾರ ಸ್ವಾಗತ ಕೋರಲಾಯಿತು
ಸುರಪುರದಲ್ಲಿ ರಾಜೂಗೌಡ ಅವರಿಗೆ ಭವ್ಯ ಮೆರವಣಿಗೆಯ ಮೂಲಕ ಮಂಗಳವಾರ ಸ್ವಾಗತ ಕೋರಲಾಯಿತು   

ಸುರಪುರ: ಸುರಪುರ ಎಸ್.ಟಿ. ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನರಸಿಂಹನಾಯಕ (ರಾಜೂಗೌಡ) ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ಭರ್ಜರಿ ಜಯ ದಾಖಲಿಸಿದರು.

2004ರಲ್ಲಿ ಕನ್ನಡನಾಡು ಪಕ್ಷದಿಂದ, 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ರಾಜೂಗೌಡ 2013ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗ ಬಿಜೆಪಿಯಿಂದ ಗೆಲುವು ಸಾಧಿಸಿ ಮೂರನೇ ಬಾರಿ ಆರ್ಯಕೆಯಾಗಿದ್ದಾರೆ.

ಒಟ್ಟು ಚಲಾವಣೆಯಾದ 1,97,196 ಮತಗಳ ಪೈಕಿ ರಾಜೂಗೌಡ ಅವರು 1,04,426 (503 ಅಂಚೆ ಮತಗಳು ಸೇರಿ) ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಾಜಾ ವೆಂಕಟಪ್ಪನಾಯಕ (81,858) ಅವರನ್ನು 22,568 ಮತಗಳಿಂದ ಸೋಲಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ರಾಜಾ ಕೃಷ್ಣಪ್ಪನಾಯಕ ಕೇವಲ 4,796 ಮತಗಳನ್ನು ಪಡೆದರು. 1,720 ನೋಟಾ ಚಲಾವಣೆಯಾಗಿವೆ.

ADVERTISEMENT

ಯಾರೂ ಗೆದ್ದರೂ ಅಲ್ಪ ಮತಗಳ ಅಂತರ ಇರುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಪಾಡಿಕೊಂಡ ಬಂದ ರಾಜೂಗೌಡ ಕೊನೆಗೆ 22,568 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ರಾಜೂಗೌಡ ಗೆಲುವು ಸಾಧಿಸುತ್ತಿದ್ದಂತೆ ಕ್ಷೇತ್ರದಾದ್ಯಂತ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತು. ಗುಲಾಲು ಎರಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ನಗರದ ಗಾಂಧಿವೃತ್ತದಲ್ಲಿ ಸಾಗರೋಪಾದಿಯಲ್ಲಿ ಸೇರಿದ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ರಾಜೂಗೌಡ ಯಾದಗಿರಿಯ ಎಣಿಕೆ ಕೇಂದ್ರದಿಂದ ನಗರಕ್ಕೆ ಬರುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಭವ್ಯ ಸ್ವಾಗತ ಕೋರಿದರು. ಲಕ್ಷ್ಮೀಪುರ, ತಿಮ್ಮಾಪುರ, ರಂಗಂಪೇಟೆ, ಹಸನಾಪುರಗಳಲ್ಲಿ ರಾಜೂಗೌಡ ಅವರನ್ನು ವಾಹನದಲ್ಲಿ ಮೆರವಣಿಗೆ ನಡೆಸಿದರು. ಮಹಿಳೆಯರು ಆರತಿ ಬೆಳಗಿ ಹರಸಿದರು.

ಗಾಂಧಿವೃತಕ್ಕೆ ಮೆರವಣಿಗೆ ಬರುತ್ತಿದ್ದಂತೆ ಕಾರ್ಯಕರ್ತರ ಘೋಷಣೆ ಮುಗಿಲು ಮುಟ್ಟಿತ್ತು. ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ರಾಜೂಗೌಡ ಕೈಮುಗಿದು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೂಗೌಡ, ‘ಇಷ್ಟೊಂದು ಮತಗಳ ಅಂತರದಿಂದ ಮತದಾರರು ಗೆಲ್ಲಿಸಿರುವುದು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಈ ಗೆಲುವನ್ನು ನಾನು ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.