ADVERTISEMENT

‘ಕುವೆಂಪು ಸಾಹಿತ್ಯ ಅಧ್ಯಯನದಿಂದ ಹೊಸತನ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 6:16 IST
Last Updated 9 ಜನವರಿ 2014, 6:16 IST

ಹುಣಸಗಿ: ‘ಓದು ನಮ್ಮಲ್ಲಿನ ಸ್ವಯಂಭಾವ ಹೆಚ್ಚಿಸಿಕೊಳ್ಳಲು ಅಲ್ಲ. ಬದಲಿಗೆ ನಮ್ಮಲ್ಲಿ ನಾವು ಪರಿವರ್ತನೆ ಕಂಡುಕೊಳ್ಳಲು ಎಂದು ತಿಳಿದಾಗ ಮಾತ್ರ ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಪರಿಪಕ್ವತೆ ಕಾಣಲು ಸಾಧ್ಯ ಎಂದು ಸಾಹಿತಿ ಚಂದ್ರಗೌಡ ಕುಲಕರ್ಣಿ ಅಭಿಪ್ರಾಯ ಪಟ್ಟರು.

ಹುಣಸಗಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಶ್ವಚೇತನ ಸಾಂಸ್ಕೃತಿಕ ವೇದಿಕೆ ವತಿಯಿಂದ ಕುವೆಂಪು ಜೀವನ ಸಾಧನೆ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಅವರು ಕೇವಲ ಒಬ್ಬ ವ್ಯಕ್ತಿ, ಒಬ್ಬ ಸಾಹಿತಿಯಾಗದೇ, ಅವರೊಬ್ಬ ಸಾಹಿತ್ಯದ ವ್ಯಾಪಕ ಶಕ್ತಿ. ಅವರ ಸಾಹಿತ್ಯದ ಕುರಿತು ಯಾವುದೇ ಮಜಲುಗಳಿಂದ ಅಧ್ಯಯನ ಮಾಡಿ­ದರೂ ಪ್ರತಿ ಬಾರಿಯೂ ಒಂದೊಂದು ಹೊಸತನ ಸಿಗುತ್ತದೆ. ಅವರಂತೆ ಪೂರ್ಣಚಂದ್ರ ತೇಜಸ್ವಿಯವರು ಕೂಡಾ ಮುಂದುವರಿಸಿಕೊಂಡು ಸಾಹಿತ್ಯ ಪ್ರಕಾರದಲ್ಲಿ ಹೊಸತನ ಹುಟ್ಟು ಹಾಕಿದ್ದಾರೆ, ಅವರದ್ದು ಅದ್ಭೂತ ಸಾಹಿತ್ಯ ಎಂದು ಹಲವಾರು ನಿದರ್ಶನಗಳ ಮೂಲಕ ತಿಳಿಸಿದ ಅವರು, ಒಂದು ಕೃತಿಯನ್ನು ಅಧ್ಯಯನ ಮಾಡಿದಾಗಲೇ ಅದರ ಸಾರವನ್ನು ತಿಳಿದುಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜು ಪ್ರಾಚಾರ್ಯ ಐ.ಬಿ. ಮರೋಳ ಮಾತನಾಡಿದರು. ವಿಶ್ವಚೇತನ ಬಳಗದ ಅಧ್ಯಕ್ಷ ಶಿವಕುಮಾರ ಬಂಡೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಸಣ್ಣ ಗೊಡ್ರಿ, ಆರ್.ಎಲ್. ಸುಣಗಾರ, ಷಣ್ಮುಖಪ್ಪ ಪೊಲೀಸ್‌ ಪಾಟೀಲ, ರೇವಣ್ಣ ಬ್ಯಾಕೋಡ, ಡಾ.ಎಂ.ಎಸ್. ಹುದ್ದಾರ್. ಮಲ್ಲಿಕಾರ್ಜುನ ಸ್ಥಾವರಮಠ, ಸಂಗನಗೌಡ ಪಾಟೀಲ, ಬಸವರಾಜ ವಂದಲಿ, ಹನೀಫ್ ಬೆಣ್ಣೂರ್, ನಿಂಗನಗೌಡ ಪಾಟೀಲ, ನಾಗಪ್ಪ ಅಡಿಕ್ಯಾಳ, ಸಿದ್ದಣ್ಣ ಬಳಿ ಇದ್ದರು.  ಬಸಯ್ಯ ಮಠ ಸ್ವಾಗತಿಸಿದರು. ಮಶಾಕ ಯಾಳಗಿ ವಂದಿಸಿದರು. ಶಿವಾನಂದ ತೋಟದ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.