ADVERTISEMENT

‘ನಿರಂತರ ಅಧ್ಯಯನದಿಂದ ಹೆಚ್ಚಿನ ಜ್ಞಾನ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 9:28 IST
Last Updated 23 ಸೆಪ್ಟೆಂಬರ್ 2013, 9:28 IST

ಹುಣಸಗಿ: ನಿರಂತರ ಸಾಹಿತ್ಯ ಅಧ್ಯಯನದಿಂದ ಮಾತ್ರ ಹೆಚ್ಚಿನ ಜ್ಞಾನ ಸಂಪಾದಿಸಬಹುದು. ಅಲ್ಲದೇ ಸಾಹಿತಿಯಾದವರು ಅಧ್ಯಯನ-ಶೀಲ­ರಾಗಿರಬೇಕು. ಆಗ ಮಾತ್ರ ಉತ್ತಮ­ವಾದ ಕೃತಿಗಳನ್ನು ಕೊಡಲು ಸಾಧ್ಯ ಎಂದು ಸಾಹಿತಿ, ಉತ್ತರ ಕರ್ನಾಟಕ ಯುವ ಲೇಖಕರ ಬಳಗದ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ  ಕವಿ ವಿದ್ಯಾಧರ ಬಡಿಗೇರ ಅವರ ಕವನ ಸಂಕಲನ 'ಸುಧಾರಸಧಾರೆ' ಕೃತಿಯ ಬಿಡುಗಡೆ  ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಓದಿನಿಂದ ಜ್ಞಾನದ ಒಳ ಹರಿವು ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಉದ­ಯೋನ್ಮುಖ ಸಾಹಿತಿಗಳು ಗಮನ ಹರಿಸಬೇಕು. ಕನ್ನಡ ಸಾಹಿತ್ಯ ಒಬ್ಬ ವ್ಯಕ್ತಿಯ ಸಂಗಾತಿಯಾಗಿ, ಮೇರು ವ್ಯಕ್ತಿಯನ್ನಾಗಿ ರೂಪಿಸುವ ಅಗಾಧ­ವಾದ ಶಕ್ತಿ ಹೊಂದಿದೆ ಎಂದು ಅಭಿಪ್ರಾಯ ಪಟ್ಟರು.
ಜಾಲವಾದಿ ತಮ್ಮ ಮಾತಿನುದ್ದಕ್ಕೂ ಬೇಂದ್ರೆ, ಕುವೆಂಪು, ಕಾರಂತರ ಅನೇಕ ಕವನಗಳ ಬಗ್ಗೆ ಹೇಳಿದರು. 

ಸಾನ್ನಿಧ್ಯ ವಹಿಸಿದ್ದ ಶಹಾಪುರದ ಏಕದಂಡಿಗಿ ಮಠದ ಅಜ್ಜೇಂದ್ರ ಸ್ವಾಮಿಗಳು ಮಾತನಾಡಿ, ನಮ್ಮ ಹಳಿಯ ಜನಪದರು ಹಲವಾರು ಅನುಭಾವದ ನುಡಿಗಳನ್ನು ಹಾಡಿ ಹೊಗಳಿದ್ದಾರೆ. ಜನಪದ ಸಾಹಿತ್ಯ ಸೊಗಸಾದ ಸಾಹಿತ್ಯವಾಗಿದೆ. ಕವಿ ವಿದ್ಯಾಧರ ಬಡಿಗೇರರ ಕಸಬಾರಿಗೆ, ಸಗರನಾಡು, ಸಂಸಾರ ದೋಣಿ, ಕನ್ನಡ ನಾಡು ಸೇರಿದಂತೆ ಹಲವಾರು ಕವನಗಳ ಮೂಲಕ ಜನರ ನಾಡಿಮಿಡಿತ, ದೇಶಭಕ್ತಿಯನ್ನು ಎತ್ತಿ ತೋರಿಸಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ವಿಜಾಪುರ ಜಿಲ್ಲಾ ಘಟಕದ ಅಧ್ಯಕ್ಷ ಅರ್ಜುನ ಕೋರಟಕರ್, ಕವನ ಸಂಕಲನ ಬಿಡು­ಗಡೆ ಮಾಡಿದರು.
ಕಸಾಪ ಹುಣಸಗಿ ವಲಯ ಘಟಕದ ಅಧ್ಯಕ್ಷ ವೀರೇಶ ಹಳ್ಳೂರ್, ಪ್ರಾಚಾ­ರ್ಯ ಆರ್.ಎಲ್.­ಸುಣಗಾರ್ ಮತ್ತು ಮಲ್ಲಿಕಾರ್ಜುನ ಪತ್ತಾರ್, ಜಗದೀಶ ಪೋದ್ದಾರ್, ಯಲಗೂರೇಶ ಮತ್ತಿತ­ರರು ಮಾತ­ನಾಡಿದರು. ಕವಿ ವಿದ್ಯಾಧರ ಬಡಿಗೇರ ಅವರನ್ನು ಸನ್ಮಾನಿಸ­ಲಾಯಿತು.
ಗುರುನಾಥ ರಾಠೋಡ ನಿರೂಪಿಸಿದರು. ಶಿವು­ಕುಮಾರ ಬಂಡೋಳಿ ಸ್ವಾಗತಿಸಿದರು. ಸಿದ್ದಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.