ADVERTISEMENT

ಯಾದಗಿರಿ: ಸ್ಲಂ ನಿವಾಸಿಗಳಿಗೆ 200 ಮನೆಗಳು ಮಂಜೂರು

ಗುರುಮಠಕಲ್ ಕ್ಷೇತ್ರದ ಸಮಸ್ಯೆ ಅರಿತುಕೊಳ್ಳಲು ಸಂವಾದ: ಶರಣಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 2:21 IST
Last Updated 12 ಜೂನ್ 2021, 2:21 IST
ಗುರುಮಠಕಲ್ ಕ್ಷೇತ್ರದಲ್ಲಿನ ಜನರ ಸಮಸ್ಯೆ ಅರಿತುಕೊಳ್ಳಲು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ವಿಡಿಯೊ ಸಂವಾದ ನಡೆಸಿದರು
ಗುರುಮಠಕಲ್ ಕ್ಷೇತ್ರದಲ್ಲಿನ ಜನರ ಸಮಸ್ಯೆ ಅರಿತುಕೊಳ್ಳಲು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ವಿಡಿಯೊ ಸಂವಾದ ನಡೆಸಿದರು   

ಯಾದಗಿರಿ: ಗುರುಮಠಕಲ್ ಪಟ್ಟಣದಲ್ಲಿನ ಸ್ಲಂ ನಿವಾಸಿಗಳಿಗೆ ಸರ್ಕಾರದಿಂದ 200 ಮನೆಗಳು ಮಂಜೂರಾಗಿವೆ. ಅಲ್ಲದೆ ಹೌಸಿಂಗ್ ಬೋರ್ಡ್‍ನ ಎಂಐಜಿ, ಎಲ್‍ಐಜಿ ಮನೆ ನಿರ್ಮಾಣಕ್ಕೆ ₹20 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ತಿಳಿಸಿದರು.

ಗುರುಮಠಕಲ್ ಕ್ಷೇತ್ರದಲ್ಲಿನ ಜನರ ಸಮಸ್ಯೆ ಅರಿತುಕೊಳ್ಳಲು ಜೆಡಿಎಸ್‌ ಕ್ಷೇತ್ರದ ಗ್ರಾಪಂ ಅಧ್ಯಕ್ಷರ, ಸದಸ್ಯರ ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಝೂಮ್ ಮೀಟ್‍ನಲ್ಲಿ ಶುಕ್ರವಾರ ಸಂವಾದ ನಡೆಸಿ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರ ಬದುಕು ಸಂಪೂರ್ಣ ಮೂರಾಬಟ್ಟೆಯಾಗಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿತುಕೊಳ್ಳಲು ತಾವು ವಿಡಿಯೋ ಸಂವಾದ ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಯರಗೋಳ, ಹತ್ತಿಕುಣಿ, ಸೈದಾಪುರ, ಬಳಿಚಕ್ರ, ಕಂದಕೂರ, ಪುಟಪಾಕ್ ಹಾಗೂ ಕೊಂಕಲ್ ಹೋಬಳಿ ವ್ಯಾಪ್ತಿಯಲ್ಲಿ ಗ್ರಾಮಗಳ ಸಮಸ್ಯೆಗಳನ್ನು ಗ್ರಾಪಂ ನೂತನ ಅಧ್ಯಕ್ಷರು ಹಾಗೂ ಸದಸ್ಯರು ಬಿಚ್ಚಿಟ್ಟರು. ಹಳ್ಳಿಗಳಿಗೆ ಪಿಡಿಒಗಳು ಬಾರದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಪಕ್ಷದ ಕಾರ್ಯಕರ್ತರು ಗಮನಕ್ಕೆ ತಂದರು.

ಕ್ಷೇತ್ರದ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ಮತ್ತೆ 3 ಸಾವಿರ ಎಕರೆ ಭೂಸ್ವಾಧೀನ ಪಡಿಸಿಕೊಳ್ಳುವ ಬಗ್ಗೆ ಸಂವಾದದಲ್ಲಿ ವಿಸ್ಕೃತ ಚರ್ಚೆ ನಡೆಯಿತು.ಈ ಬಗ್ಗೆ ಮಾತನಾಡಿದ ಕಂದಕೂರ, ಮೊದಲು ಸರ್ಕಾರ ವಶ ಪಡಿಸಿಕೊಂಡ 3,300 ಎಕರೆ ಭೂಮಿಯ ಪರಿಹಾರ ನೀಡಲಿ. ನಂತರ ಮತ್ತೆ ಸ್ವಾಧೀನದ ಮಾತನಾಡಲಿ. ಹಾಗೇನಾದರೂ ಭೂಸ್ವಾಧೀನಕ್ಕೆ ಸರ್ಕಾರ ಮುಂದಾದರೆ ಜನರಿಗಾಗಿ ಎಂಥ ಹೋರಾಟಕ್ಕೂ ನಾನು ಸಿದ್ಧನಿದ್ದೇನೆ ಎಂದು ಧೈರ್ಯ ತುಂಬಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.