ಹುಣಸಗಿ ತಾಲ್ಲೂಕಿನ ಮಾಳನೂರು ಗ್ರಾಮದ ಬಳಿ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಯುತ್ತಿರುವುದು
ಹುಣಸಗಿ: ಕೃಷ್ಣಾ ಅಚ್ಚುಕುಟ್ಟು ಪ್ರದೇಶದ ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ವಿತರಣಾ ಕಾಲುವೆಗಳಿಗೆ ಮಂಗಳವಾರದಿಂದ (ಜು.8) ನೀರು ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆಯಿಂದ ನೀರು ಹರಿಸಲಾಗುತ್ತಿದ್ದು, ಸಂಜೆ ಹೊತ್ತಿಗೆ ಮುಖ್ಯ ಕಾಲುವೆಯಲ್ಲಿ 4 ಸಾವಿರ ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ವಿತರಣಾ ಕಾಲುವೆ ಮತ್ತು ಹೊಲಗಾಲುವೆಗಳ ರೈತರಿಂದ ನೀರು ಬಿಡುವ ಕುರಿತಂತೆ ವಿನಂತಿಯ ಮೇರೆಗೆ ಆಯಾ ಕಾಲುವೆ ಗೇಟ್ಗಳನ್ನು ಎತ್ತಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಾರಿ ಕ್ಲೋಜರ್ ಹಾಗೂ ವಿಶೇಷ ದುರಸ್ತಿ ಕಾಮಗಾರಿ ನಿರ್ವಹಿಸದೇ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ಕ್ಲೋಜರ್ ಕಾಮಗಾರಿ ತಡವಾಗಿ ಟೆಂಡರ್ ಕರೆಯಲಾಗಿತ್ತು. ಆದ್ದರಿಂದ ನೀರು ಬಂದ ಬಳಿಕ ಕಾಲುವೆ ಜಾಲದ ಸೇವಾ ರಸ್ತೆಗಳ ದುರಸ್ತಿ ಹಾಗೂ ಮುಳ್ಳು, ಜಾಲಿಕಂಟಿಗಳ ತೆರವು ಕಾರ್ಯ ನಡೆಸಲಾಯಿತು. ಆ ಬಳಿಕೆ ಕಾಲುವೆಗೆ ನೀರು ಸ್ಥಗಿತವಾದ ಸಂದರ್ಭದಲ್ಲಿ ಕಾಲುವೆಯಲ್ಲಿನ ಹೂಳು ತೆಗೆಯುವದು ಮತ್ತು ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗಿತ್ತು ಎಂದು ಹುಣಸಗಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಬಾರಿ ಕೂಡಾ ಕ್ಲೋಜರ್ ಕಾಮಗಾರಿ 80 ಲಕ್ಷ ಹಾಗೂ ವಿಶೇಷ ದುರಸ್ತಿ ಕಾಮಗಾರಿಗಳಿಗೆ ಒಂದು ಕೋಟಿ ಅನುದಾನ ಬಂದಿದೆ. ಆದರೆ ಕಾಮಗಾರಿಗಳು ಅನುಮೋದನೆಗೊಂಡ ಬಳಿಕ ಟೆಂಡರ್ ಪ್ರಕ್ರಿಯೆ ನಡೆಯಲಿದೆ’ ಎಂದು ವಿವರಿಸಿದರು.
ಮುಂದುವರಿದ ಹೊರ ಹರಿವು
ಹುಣಸಗಿ: ಕಳೆದ ಐದು ದಿನಗಳಿಂದಲೂ ಒಂದು ಲಕ್ಷ ಕ್ಯೂಸೆಕ್ಗೂ ಅಧಿಕ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದೆ. ಭಾನುವಾರ ಮಧ್ಯಾಹ್ನದ ಬಳಿಕ 1.15 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಂಗಳವಾರವೂ ಇದೆ ಹಂತದಲ್ಲಿ ನೀರು ಬಿಡಲಾಗುತ್ತಿದೆ. ಇದರಿಂದಾಗಿ ಬಸವಸಾಗರ ಜಲಾಶಯದ 30 ಕ್ರಸ್ಟ್ಗೇಟ್ಗಳ ಮೂಲಕ 1.06 ಲಕ್ಷ ಕ್ಯೂಸೆಕ್ ಹಾಗೂ ಮುರುಡೇಶ್ವರ ವಿದ್ಯುತ್ ಉತ್ಪಾದನಾ ಘಟಕದ ಮೂಲಕ 6 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.