ADVERTISEMENT

50 ಬಾಲ ಕಾರ್ಮಿಕರು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:04 IST
Last Updated 20 ಡಿಸೆಂಬರ್ 2013, 10:04 IST

ಯಾದಗಿರಿ: ಕೃಷಿ ಕೂಲಿಗೆಂದು ಬಾಲಕಾರ್ಮಿಕರನ್ನು ಹೊತ್ತೊಯ್ಯು­ತ್ತಿದ್ದ ಟಂಟಂಗಳನ್ನು ಹಿಡಿದ ಕಾರ್ಮಿಕ ಇಲಾಖೆ ಅಧಿಕಾರಿಗಳು, 50ಕ್ಕೂ ಹೆಚ್ಚು ಬಾಲ ಕಾರ್ಮಿಕರನ್ನು ಗುರು­ವಾರ ಬೆಳಿಗ್ಗೆ ನಗರದ ಹೊರವಲಯ­ದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳು ಜಂಟಿಯಾಗಿ ಈ ದಾಳಿ ನಡೆಸಿದವು. ತಾಲ್ಲೂಕಿನ ಆಶನಾಳ ಗ್ರಾಮದ 22 ಮಕ್ಕಳು, ಯರಗೋಳ ಗ್ರಾಮದ 8 ಮಕ್ಕಳು, ನಗರದ ಅಂಬೇಡ್ಕರ್ ಬಡಾವಣೆಯ 8 ಮಕ್ಕಳು, ಶಹಾಪುರ ತಾಲ್ಲೂಕಿನ 4 ಮಕ್ಕಳು, ಬಸವಂತಪೂರ ಗ್ರಾಮದ 8ಮಕ್ಕಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಎಲ್ಲರನ್ನು ಇಲ್ಲಿಯ ಡಾನ್ ಬಾಸ್ಕೋ ಸೇವಾ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಮಕ್ಕಳ ಪಾಲಕರು ಪರಿಪರಿಯಾಗಿ ಬೇಡಿ­ಕೊಳ್ಳು­ತ್ತಿದ್ದುದು ಸಾಮಾನ್ಯವಾಗಿತ್ತು. ‘ಇಲ್ರಿ ಯಪ್ಪಾ ನಾವು ದುಡಕೊಂಡ ತಿನ್ನೋ ಮಂದಿ. ಸಾಲಿ ಹಚ್ಚಿಲ್ಲರೀ. ಸಣ್ಣ ಮಕ್ಕಳ ಅದಾವ್. ನಮ್ ಜೋಡಿ ಕೆಲಸಕ ಬರ್ತಾವ. ನಾವ್ ಬಡವ ಮಂದಿ. ನಮ್ಮನ್ನ ಬಿಟ್ಟ ಬಿಡರೀ’ ಎಂದು ಕಾರ್ಮಿಕ ಅಧಿಕಾರಿಗಳ ಎದುರು ಮಕ್ಕಳ ಪಾಲಕರು ಮನವಿ ಮಾಡಿಕೊಂಡರು.

ನಿಮ್ಮ ಮಕ್ಕಳಿಗೆ ನಾವೇನು ಮಾಡುವುದಿಲ್ಲ. ಒಳ್ಳೆಯ ಶಾಲೆಗೆ ಕಳುಹಿಸಿ ಓದುಸುತ್ತೇವೆ. ಬೇಕಿದ್ದರೆ ನಿಮ್ಮೂರಿನ ಶಾಲೆಯಲ್ಲಿ ಓದಲು ಬಿಡುತ್ತೇವೆ. ಅವರನ್ನು ದುಡಿಯಲು ಕಳಹಿಸಬೇಡಿ ಎಂದು ಕಾರ್ಮಿಕ ನಿರೀಕ್ಷಕ ಚನ್ನಾರಡ್ಡಿ ಚವ್ಹಾಣ ಸಲಹೆ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ನಿರ್ದೇಶಕ ರಘುವೀರ ಸಿಂಗ್ ರಾಠೋಡ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್‌, ಸಾರಿಗೆ ಅಧಿಕಾರಿ ಪರಮಾನಂದ ಸಜ್ಜನ, ಎ.ಎಸ್.ಐ. ಸುಗದೇವ ಬೆಳಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.