ADVERTISEMENT

ಖರೀದಿ ಕೇಂದ್ರದ ಲಾಭ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:24 IST
Last Updated 13 ಜನವರಿ 2018, 6:24 IST

ಯಾದಗಿರಿ: ‘ಹೋಬಳಿಮಟ್ಟದಲ್ಲಿ ತೊಗರಿ ಕೇಂದ್ರ ಆರಂಭಿಸಿರುವುದರಿಂದ ರೈತರ ಹೊರೆ ಕಡಿಮೆಯಾಗಿದೆ. ಖರೀದಿ ಕೇಂದ್ರದ ಲಾಭವನ್ನು ರೈತರು ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಪುಟಗಿ ಹೇಳಿದರು. ಸಮೀಪದ ಹತ್ತಿಕುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ತೊಗರಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತಂದಿದೆ. ನಿಸರ್ಗ ಮುನಿಸಿಕೊಂಡಿರುವುದರಿಂದ ರೈತರು ಬರಗಾಲ ಸಮಸ್ಯೆ ಎದುರಿಸಿದರು. ಅವರ ಸಂಕಷ್ಟಗಳನ್ನು ಅರಿತು ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ಈಗ ತೊಗರಿ ಖರೀದಿ ಕೇಂದ್ರಗಳನ್ನು ಹೋಬಳಿಮಟ್ಟದಲ್ಲಿ ಆರಂಭಿಸುವ ಮೂಲಕ ಜನಪರ ಕೆಲಸ ಮಾಡಿದೆ’ ಎಂದರು.

ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ ಮಾತನಾಡಿ, ‘ರೈತರ ಬೇಡಿಕೆ ಅರಿತು ಸರ್ಕಾರ ಇಲ್ಲಿ ಖರೀದಿ ಕೇಂದ್ರ ಆರಂಭಿಸುವ ಮೂಲಕ ಅವರಿಗೆ ಸೂಕ್ತ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ’ ಎಂದರು.

ADVERTISEMENT

ಎಪಿಎಂಸಿ ಅಧ್ಯಕ್ಷ ಚಂದ್ರಾರಡ್ಡಿ ಬಂದಳ್ಳಿ ಮಾತನಾಡಿ, ‘ಖರೀದಿ ಕೇಂದ್ರಕ್ಕೆ ಮಾರುಕಟ್ಟೆ ಸಮಿತಿ ವತಿಯಿಂದ ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಶರಣಪ್ಪಗೌಡ ಮಾಲಿ ಪಾಟೀಲ, ಭೋಜಣಗೌಡ ಯಡ್ಡಳ್ಳಿ, ಶರಣಪ್ಪ ಶಂಕ್ರಪ್ಪನೋರ್, ಭೀಮರಡ್ಡಿ ರಾಂಪುರಳ್ಳಿ, ಮಹಾದೇವಪ್ಪ ಖಂಡಪ್ಪನೋರ್, ವೆಂಕಟೇಶ ಬಂದಳ್ಳಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವಕುಮಾರ ಪುಟಗಿ, ಸಾಯಬಣ್ಣ ಯಾದಗಿರಿ, ಸುರೇಶ ಕನ್ನಡಿ, ಬಸವರಡ್ಡಿ ಕಟಗಿಶಹಾಪುರ, ಅಲ್ಲಾಭಕ್ಷ ಇನಾಂದಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.