ADVERTISEMENT

‘ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2018, 7:32 IST
Last Updated 6 ಫೆಬ್ರುವರಿ 2018, 7:32 IST

ಗುರುಮಠಕಲ್: ‘ಮಡಿವಾಳ ಸಮಾಜವು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು, ಸಮಾಜವು ಅಭಿವೃದ್ಧಿ ಹೊಂದಬೇಕಾ ದರೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ. ಶಿಕ್ಷಣದಿಂದ ಮಾತ್ರ ಸಮಾಜದ ಏಳ್ಗೆ ಸಾಧ್ಯ’ ಎಂದು ವಕೀಲ ನಾಗಪ್ಪ ಮಗ್ದಂಪುರ ಹೇಳಿದರು. ಪಟ್ಟಣದ ಮಡಿವಾಳ ಸಮಾಜದ ವತಿಯಿಂದ ಭಾನುವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾಜವು ಉತ್ತಮ ಶಿಕ್ಷಣ ಪಡೆ ದರೆ ಜಗತ್ತಿನ ಓಟದೊಂದಿಗೆ ಸ್ಪರ್ಧಿಸಲು ಸಾಧ್ಯ. ಸಮಾಜದ ಒಗ್ಗಟ್ಟಿನ ಕೊರತೆ ನೀಗಿಸಿಕೊಳ್ಳುವ ಅವಶ್ಯಕತೆಯಿದೆ’ ಎಂದರು. ‘ಮಾಚಿದೇವರ ಆದರ್ಶದಂತೆ ವಿಶ್ವ ಭ್ರಾತೃತ್ವ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಉಳಿದೆಲ್ಲಾ ಸಮುದಾಯಗಳೊಂದಿಗೆ ಪ್ರೀತಿ, ಸಹೋದರತೆಯ ಒಡನಾಟವನ್ನು ಬೆಳೆಸಿಕೊಳ್ಳೋಣ’ ಎಂದು ಸಲಹೆ ನೀಡಿದರು.

ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಮಡಿವಾಳಪ್ಪ ಬಿಜಾಸಪೂರ ಹಾಗೂ ಮಹಾದೇವಪ್ಪ ಯಲ್ಸತ್ತಿ ಅವರು ಭಾವಚಿತ್ರದ ಮೆವಣಿಗೆಗೆ ಚಾಲನೆ ನೀಡಿದರು. ಲಕ್ಷ್ಮಪ್ಪ ಬಿಚ್ಚಪ್ಪ ಅಧ್ಯಕ್ಷತೆ ವಹಿಸಿದ್ದರು. ಬಾಲಪ್ಪ ಯಲ್ಲಮ್ಮೋಳ, ಉಪನ್ಯಾಸಕ ಶ್ರೀನಿವಾಸ ದೇವಪ್ಪ, ಅಶೋಕ ನಿಂಗನೋಳ, ಶೇಖರ ಮಡಿವಾಳ ಸೂರ್ಯಕಾಂತ ಮಡಿವಾಳ, ಲಕ್ಷ್ಮಪ್ಪ, ನರಸಪ್ಪ, ಬಾಲರಾಜ ಇದ್ದರು. ಶಿಕ್ಷಕ ಶ್ರೀನಿವಾಸ ನಿರೂಪಿಸಿದರು.

ADVERTISEMENT

ಮೆರವಣಿಗೆ: ಪಟ್ಟಣದ ಗಜಲಮ್ಮ ಕಟ್ಟದಿಂದ ಆರಂಭಗೊಂಡ ಮೆರವ ಣಿಗೆಯು ಪ್ರಮುಖ ಬೀದಿಗಳ ಮೂಲಕ ನಗರೇಶ್ವರ ಮಂದಿರದಿಂದ ಗಜಲಮ್ಮ ಕಟ್ಟಕ್ಕೆ ಹಿಂದಿರುಗಿತು. ಮೆರವಣಿಗೆಯುದ್ದಕ್ಕೂ ಪೂರ್ಣಕುಂಭ ಕಳಶಗಳನ್ನು ಹೊತ್ತ ಮಹಿಳೆಯರು ಹಾಗೂ ವಿವಿಧ ವೇಷಧಾರಿಗಳಾಗಿದ್ದ ಚಿಣ್ಣರು ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.