ಯಾದಗಿರಿ: ‘ನಾಯ್ಕಲ್ ಜಿಲ್ಲಾ ಪಂಚಾಯಿತಿ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಪೂರೈಸುವ ಉದ್ದೇಶದ ಟಾಸ್ಕ್ ಪೋರ್ಸ್ ಯೋಜನೆಗಳಲ್ಲಿ ಒಟ್ಟು ₹4.98 ಕೋಟಿ ಅನುದಾನ ದುರ್ಬಳಕೆಯಾಗಿದ್ದರೂ ಜಿಲ್ಲಾ ಪಂಚಾಯಿತಿ ಸಿಇಒ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿ ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ದಲಿತ ಸೇನೆ ಪದಾಧಿಕಾರಿಗಳು, ಗ್ರಾಮಸ್ಥರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
‘ಅವ್ಯವಹಾರ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ತನಿಖೆ ನಡೆಸಿಲ್ಲ. ಹಣ ದುರ್ಬಳಕೆ ಆಗಿರುವ ಕುರಿತು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸಿಲ್ಲ. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಬೇಕು’ ಎಂದು ಮುಖಂಡ ಡಾ.ಶರಣಭೂಪಾಲರಡ್ಡಿ ನಾಯ್ಕಲ್ ಸರ್ಕಾರವನ್ನು ಆಗ್ರಹಿಸಿದರು.
‘2016–17 ಹಾಗೂ 2017–18ನೇ ಸಾಲಿನ ಎನ್ಆರ್ಡಿ ಡಬ್ಲ್ಯೂಪಿ ಹಾಗೂ ಎಸಿಡಿಪಿ ಮತ್ತು 2016–17ನೇ ಸಾಲಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಟಾಸ್ಕ್ ಪೋರ್ಸ್ ಯೋಜನೆಗಳಲ್ಲಿ ಒಟ್ಟು ₹4.98 ದುರ್ಬಳಕೆಯಾಗಿದೆ. ಈ ಯೋಜನೆ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೂ ತಂದಿಲ್ಲ. ಅಧಿಕಾರಿಗಳೇ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೋಟಿಗಟ್ಟಲೇ ಅನುದಾನ ಖರ್ಚಾಗಿದೆ ಎಂದು ಹೇಳುವ ಅಧಿಕಾರಿಗಳು ನಾಯ್ಕಲ್ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯಲ್ಲಿನ ಜನರಿಗೆ ಹನಿನೀರು ಪೂರೈಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು.
‘ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸರಬರಾಜು ಇಲಾಖೆ ಎಂಜಿನಿಯರ್, ಶಹಾಪುರ ವಿಭಾಗದ ಎಂಜಿನಿಯರ್ ಶರಣಪ್ಪ ಬಡಿಗೇರ ಅವರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.
ದಲಿತ ಸೇನೆ ರಾಜ್ಯ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ ಅನ ಸೂರ, ಮುಖಂಡರಾದ ಶರಣರೆಡ್ಡಿ ಹತ್ತಿಗೂಡುರು, ನಿಂಗಣ್ಣ ಕರಡಿ, ಹಣಮಂತರೆಡ್ಡಿ, ಬಾಲಪ್ಪ ಛಲವಾದಿ, ದೇವಪ್ಪ ಅನಸೂರ್, ಮಾಳಪ್ಪ ತುಮಕೂರ, ಪರಶುರಾಮ ತುಮಕೂರ, ಸಿದ್ದಪ್ಪ ಟಿ. ವಡಗೇರಾ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.