ADVERTISEMENT

ಶೇ 90ರಷ್ಟು ಅಂಗನವಾಡಿಗಳಿಗೆ ಮೂಲ ಸೌಲಭ್ಯಗಳೇ ಇಲ್ಲ: ನ್ಯಾಯಾಧೀಶ ಮರೆಯಪ್ಪ

ಹಿರಿಯ ಸಿವಿಲ್ ನ್ಯಾಯಾಧೀಶ ಮರೆಯಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 15:32 IST
Last Updated 14 ಆಗಸ್ಟ್ 2024, 15:32 IST
ಮರೆಯಪ್ಪ
ಮರೆಯಪ್ಪ   

ಯಾದಗಿರಿ: ಇತ್ತಿಚೆಗೆ ನಗರ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಬಗ್ಗೆ ತಿಳಿದು ಬಂದಿದ್ದು, ಶೀಘ್ರ ವರದಿ ಸಲ್ಲಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮರೆಯಪ್ಪ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ, ತಾಲ್ಲೂಕಿನ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದಾಗ ಹಲವಾರು ಸಮಸ್ಯೆಗಳು ಗಮನಕ್ಕೆ ಬಂದವು. ಕೂಡಲೇ ಅವುಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 1,568 ಅಂಗನವಾಡಿ ಕೇಂದ್ರಗಳಿದ್ದು, 931 ಸ್ವಂತ ಕಟ್ಟಡ, 469 ಬಾಡಿಗೆ ಕಟ್ಟಡಗಳನ್ನು ಒಳಗೊಂಡಿವೆ. ಶೇ 90 ರಷ್ಟು ಅಂಗನವಾಡಿಗಳಿಗೆ ಮೂಲ ಸೌಲಭ್ಯಗಳು ಇಲ್ಲ.‌ ಆಟದ ಮೈದಾನ, ಕಾಂಪೌಂಡ್, ಕೇಂದ್ರಕ್ಕೆ ತೆರಳಲು ದಾರಿ ಇಲ್ಲ‌. ಕುಡಿಯುವ ನೀರು ಸಮಸ್ಯೆ ಇದೆ.‌ ಸ್ವಚ್ಛತೆ ಇಲ್ಲ.‌ ತಮ್ಮ ಇಷ್ಟಕ್ಕೆ ಅನುಸಾರ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದಾರೆ. ನಿಕೃಷ್ಟ ಪರಿಸ್ಥಿತಿ ಇದೆ ಎಂದು ಪರಿಸ್ಥಿತಿ ಬಗ್ಗೆ ವಿವರಿಸಿದರು.

ADVERTISEMENT

ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸೇವಾ ಮನೋಭಾವ ಇಲ್ಲ. ತಾವೇ ಅಂಗನವಾಡಿ ನಡೆಸುತ್ತೇವೆ ಎನ್ನುವ ರೀತಿ ವರ್ತನೆಗಳಿವೆ. ಆಯಾಗಳ ಬಳಿ ಶಿಕ್ಷಕಿಯರ ಫೋನ್ ನಂಬರ್ ಇಲ್ಲ. ‌ಹಲವರು ಗೊಂದಲಗಳಿವೆ. ಆದರೆ, ಇದಕ್ಕೆ ಅಪವಾದವೆಂಬಂತೆ ಕೆಲವರು ಸ್ವಂತ ಖರ್ಚಿನಿಂದ ಗೊಂಬೆಗಳು ಮಾಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆ ಇದೆ. ಅವರಿಗೆ ಸಿಗಬೇಕಾದ ಸೌಲಭ್ಯಗಳು ಇಲ್ಲ. ಯೋಜನೆಯ ಉದ್ದೇಶ ಈಡೇರುತ್ತಿಲ್ಲ. ಆಹಾರ ಗುಣಮಟ್ಟ ಇಲ್ಲ. ಮಕ್ಕಳನ್ನು ಸರಿಯಾಗಿ ಸಂಭಾಳಿಸುತ್ತಿಲ್ಲ.‌ ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಮೆನು ಪ್ರಕಾರ ಊಟ ಇಲ್ಲ.‌ ನಗರದಲ್ಲಿ ಪರವಾಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ವ್ಯವಸ್ಥೆ ಹದಗೆಟ್ಟಿದೆ. ಮಕ್ಕಳ ದಾಖಲಾತಿ ಎಂಟ್ರಿ ಮಾಡಿಲ್ಲ ಎಂದು ತಿಳಿಸಿದರು.

ರಾಜ್ಯ ಕಾನೂನು ಪ್ರಾಧಿಕಾರದಿಂದ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಆದೇಶ ನೀಡಲಾಗಿದೆ. ಹೀಗಾಗಿ ನಾವು ಭೇಟಿ ನೀಡಿದ ಸ್ಥಳಗಳ ವರದಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.