ಸುರಪುರ: ‘ಚಟುವಟಿಕೆ ಆಧಾರಿತ ಬೋಧನೆಯಿಂದ ಮಕ್ಕಳಲ್ಲಿ ಪಾಠದ ತಿರುಳು ನೆನಪಿನಲ್ಲಿ ಉಳಿಯುತ್ತದೆ. ಇದರಿಂದ ಮಕ್ಕಳು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ತೆಗೆದುಕೊಳ್ಳಲು ನೆರವಾಗುತ್ತದೆ’ ಎಂದು ಕಲಬುರಗಿಯ ನಿವೃತ್ತ ಉಪನ್ಯಾಸಕ ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ನಗರದ ಶರಣಬಸವ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಮತ್ತು ಶಿಕ್ಷಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತರಗತಿ ಕೋಣೆಯಲ್ಲಿ ಮಕ್ಕಳಿಗೆ ಖುದ್ದಾಗಿ ಘಟಕ ಪರೀಕ್ಷೆಯನ್ನು ತೆಗೆದುಕೊಂಡು, ಮಕ್ಕಳ ಅಂಕಗಳ ಆಧಾರದ ಮೇಲೆ ಹೇಗೆ ಬರೆಯಬೇಕು. ನಿಗದಿತ ಅವಧಿಯಲ್ಲಿ ಉತ್ತರಿಸುವ ಕ್ರಮಗಳ ತಯಾರಿ ಕುರಿತು ಸಲಹೆ ನೀಡಿದರು.
ಶಿಕ್ಷಕರು ಚಿತ್ರಪಟಗಳ ಬಳಕೆ, ವಸ್ತುಗಳ ಬಳಕೆ, ಮಾದರಿಗಳನ್ನು ಬಳಸುವ ಮೂಲಕ ವಿದ್ಯಾರ್ಥಿಗಳ ಬುದ್ದಿಮಟ್ಟವನ್ನು ಹೆಚ್ಚಿಸಬಹುದು ಎಂದು ತಿಳಿಸಿದರು.
ಶಿಕ್ಷಕರು ಮಕ್ಕಳ ಫಲಿತಾಂಶದ ಅಭಿವೃದ್ಧಿಗಾಗಿ ನಿರ್ವಹಿಸಬೇಕಾದ ಕ್ರಮಗಳನ್ನು ತಿಳಿಸಿಕೊಟ್ಟರು.
ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.