ADVERTISEMENT

ಯಾದಗಿರಿ | ಕಾನೂನು ಸೇವಾ ಕೇಂದ್ರ ಉಪಯೋಗಿಸಿಕೊಳ್ಳಲು ನ್ಯಾಯಾಧೀಶರ ಸಲಹೆ

ಮಹಿಳೆಯರು‌ ನಿರ್ಭೀತರಾಗಿ ನ್ಯಾಯ ಪಡೆಯಲು ಕೇಂದ್ರ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:36 IST
Last Updated 30 ಜೂನ್ 2020, 16:36 IST
ಯಾದಗಿರಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಾನೂನು ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು
ಯಾದಗಿರಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕಾನೂನು ಸೇವಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು   

ಯಾದಗಿರಿ: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು‌ ನಿರ್ಭೀತರಾಗಿ ನ್ಯಾಯ ಪಡೆಯಲು ಕಾನೂನು ಸೇವಾ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಕೆ.ಸಾಲಮಂಟಪಿ ಸಲಹೆ ನೀಡಿದರು.

ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ ಮತ್ತು ಜಿಲ್ಲಾ ವಕೀಲರ ಸಂಘ ಸಂಯುಕ್ತಾಶ್ರಯದಲ್ಲಿ ಅಪಹರಣ ಮತ್ತು ದೌರ್ಜನ್ಯಕೊಳಗಾದವರ ನೆರವಿಗೆ ಬರುವ ಕಾನೂನು ಸೇವಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನೆರವಿಗೆ ಧಾವಿಸಲು ನಗರದ ಮಹಿಳಾ ಠಾಣೆಯಲ್ಲಿ ಕಾನೂ‌ನು ಸೇವಾ ಕೇಂದ್ರ ಆರಂಭಿಸಲಾಗಿದೆ. ಈ‌ ಸೇವಾ ಕೇಂದ್ರವು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು, ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಅಲ್ಲದೆ ಒಬ್ಬ ಮಹಿಳಾ ನ್ಯಾಯವಾದಿಯನ್ನು ನೇಮಿಸಲಾಗಿದೆ ಎಂದರು.

ಲಾಕ್‌ಡೌನ್‌ ವೇಳೆ ಕರ್ತವ್ಯ ನಿರತ ಕೊರೊನಾ ಸೈನಿಕರಿಗೆ ನಿರಂತರವಾಗಿ ಪಾನಕ ಮತ್ತು ಮಜ್ಜಿಗೆ ವಿತರಿಸಿದ ದಿನೇಶ ಗಾಂಧಿ ದಂಪತಿಯನ್ನು ಮಹಿಳಾ ಠಾಣೆ ಸಿಬ್ಬಂದಿ ಸನ್ಮಾನಿಸಿದರು.

ADVERTISEMENT

ಜಿಲ್ಲಾ ವಕೀಲರ ಸಂಘ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಸಿ.ಎಸ್‌.ಮಾಲಿ ಪಾಟೀಲ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ನಾಗಯ್ಯ ಗುತ್ತೆದಾರ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ವಿನಯಕುಮಾರ್, ಮಹಿಳಾ ಠಾಣೆ ಪಿಐ ಹೊಸಕೇರಪ್ಪ ಕೆ., ಗ್ರಾಮೀಣ ಠಾಣೆ ಪಿಎಸ್‌ಐ ವೀರಣ್ಣ ಮಗಿ, ಸಂಚಾರಿ ಪೊಲೀಸ್ ಠಾಣೆ ಪಿಎಸ್‌ಐ ಪ್ರಶಾಂತ, ಮಹಿಳಾ ಠಾಣೆ ಕಾನೂನು ಸಲಹೆಗಾರರಾದ ಸಾವಿತ್ರಿ ಎಂ ಪಾಟೀಲ, ಮಹಿಳಾ ಠಾಣೆ ಎಎಸ್‌ಐಗಳಾದ ದತ್ತಾತ್ರೇಯ, ರಾಮಲು, ಸಿಬ್ಬಂದಿ ಸುಮತಿ, ಸುನೀತಾ ಇದ್ದರು.

***

ಮಹಿಳೆಯರಿಗೆ ಪೊಲೀಸ್ ಠಾಣೆಯಲ್ಲಿಯೇ ಕಾನೂನು ನೆರವು ಸಿಗುವಂತಾಗಲಿ ಎಂದು ಮಹಿಳಾ ಠಾಣೆಯಲ್ಲಿಯೇ ಸೇವಾ ಕೇಂದ್ರ ಆರಂಭಿಸಲು ಪ್ರಾಧಿಕಾರ ಕ್ರಮ ಕೈಗೊಂಡಿದ್ದು, ಮಹಿಳೆಯರಿಗೆ ವರದಾನವಾಗಲಿದೆ.
-ಪ್ರಕಾಶ ಅರ್ಜುನ ಬನಸೊಡೆ,ಸಿವಿಲ್ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.