ADVERTISEMENT

ಗ್ರಾಮೀಣರಿಗೆ ಡಿಜಿಟಲ್ ಅರಿವು ಮೂಡಿಸಲು ಸಲಹೆ

ಪಿಎಂಜಿ ದಿಶಾ ತರಬೇತಿ ಕಾರ್ಯಕ್ರಮಕ್ಕೆ ದೀಪಕ್‌ ಕುಮಾರ ಶರ್ಮಾ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 2:54 IST
Last Updated 9 ಸೆಪ್ಟೆಂಬರ್ 2021, 2:54 IST
ಯಾದಗಿರಿಯಲ್ಲಿ ನಡೆದ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನ ಕಾರ್ಯಾಗಾರದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಸಿದ್ದು ಹರಸೂರ ಮಾತನಾಡಿದರು
ಯಾದಗಿರಿಯಲ್ಲಿ ನಡೆದ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನ ಕಾರ್ಯಾಗಾರದಲ್ಲಿ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಸಿದ್ದು ಹರಸೂರ ಮಾತನಾಡಿದರು   

ಯಾದಗಿರಿ: ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನವು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಗ್ರಾಮೀಣ ಜನತೆಗೆ ಡಿಜಿಟಲ್ ಬಗ್ಗೆ ಅರಿವು ಮೂಡಿಸುವುದರಿಂದಾಗಿ ಈ ಯೋಜನೆಯೂ ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರದ ಪಿಎಂಜಿ ದಿಶಾ ಮೇಲ್ವಿಚಾರಕ ದೀಪಕ್‌ಕುಮಾರ ಶರ್ಮಾ ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತೆ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹೆಚ್ಚಾಗಿ ಅನಕ್ಷರಸ್ಥರು ಇರುವುದರಿಂದಾಗಿ ಸಿಎಸ್‍ಸಿಗಳು ಜನರೊಡನೆ ಬೆರೆತು ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆಸಾಮಾನ್ಯ ಸೇವಾ ಕೇಂದ್ರ(ಸಿಎಸ್‍ಸಿ)ಗಳು ಈ ಯೋಜನೆಯ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖರಾಗುತ್ತಾರೆ ಎಂದರು.

ADVERTISEMENT

ಈ ಯೋಜನೆಯನ್ನು ಪ್ರಚಾರಗೊಳಿಸುವುದರ ಮೂಲಕ ಯೋಜನೆಯ ಅನುದಾನವನ್ನು ಬಳಕೆಮಾಡಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಶಿಕ್ಷಣ, ವೈವಾಹಿಕ ಜೀವನಕ್ಕಾಗಿ ಮತ್ತು ಇತರೆ ಕಾರ್ಯಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ.

ಪಿಎಂಜಿ ದಿಶಾ ಯೋಜನೆಯು ಕರ್ನಾಟಕದಲ್ಲಿ ₹400 ಕೋಟಿ ವೆಚ್ಚದ ಅನುದಾನವಿದ್ದು, ಗ್ರಾಮೀಣ ಪ್ರದೇಶದ 6 ಕೋಟಿ ಮನೆಗಳನ್ನು ಡಿಜಿಟಲ್ ಸಾಕ್ಷರರನ್ನಾಗಿಸುವುದೇ ಪಿಎಂಜಿ ದಿಶಾ ಅಭಿಯಾನದ ಉದ್ದೇಶವಾಗಿದೆ. ಈ ಅನುದಾನವನ್ನು ಸಿಎಸ್‍ಸಿಗಳು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಡಿಜಿಟಲ್ ಸಾಕ್ಷರತೆ ಹೊಂದಿದವರು ಕಂಪ್ಯೂಟರ್, ಡಿಜಿಟಲ್ ಸಾಧನೆಗಳು (ಟ್ಯಾಬ್‍ಲೆಟ್, ಸ್ಮಾರ್ಟ್ ಫೋನ್‍ಗಳು) ಉಪಯೋಗಿಸಲು ಇ-ಮೇಲ್ ಕಳುಹಿಸಲು ಮತ್ತು ಸ್ವೀಕರಿಸಲು, ಇಂಟರ್‌ನೆಟ್ ಬ್ರೌಸ್ ಮಾಡಲು, ಸರ್ಕಾರದ ಸೇವೆಗಳನ್ನು ತಿಳಿಯಲು, ಮಾಹಿತಿಗಾಗಿ ಹುಡುಕಾಟ ನಡೆಸಲು, ನಗದುರಹಿತ ವಹಿವಾಟು ನಡೆಸುವುದು ಹೇಗೆ ಎಂಬುವುದರ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಅವರಿಗೆ ಉದ್ಯೋಗ ಕಲ್ಪಿಸಿಕೊಡುವುದರಿಂದಾಗಿ ದೇಶದಲ್ಲಿನ ನಿರುದ್ಯೋಗವನ್ನು ಹೋಗಲಾಡಿಸಬಹುದು ಎಂದು ಹೇಳಿದರು.

ಇ-ಶ್ರಮ ಪೋರ್ಟಲ್‌ ಅಥವಾ ಅಸಂಘಟಿತ ವಲಯದ ಕೆಲಸಗಾರರಿಗಾಗಿ ರಾಷ್ಟ್ರೀಯ ಡೇಟಾಬೇಸ್, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆಗೆಲಸಗಾರರು, ಕೃಷಿ ಕಾರ್ಮಿಕರು, ಇತರೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ವೆಬ್‍ಸೈಟ್‌ನಲ್ಲಿ ಅರ್ಜಿಗಳನ್ನು ನೋಂದಾಯಿಸಿಕೊಂಡು ಈ ಯೋಜನೆಯ ಲಾಭವನ್ನು ಪಡೆಯಬಹುದು ಎಂದರು.

ಈ ವೇಳೆ ಮುಖ್ಯ ಅತಿಥಿಗಳಾಗಿ ಕಾರ್ಮಿಕ ಇಲಾಖೆಯ ಉಪನಿರ್ದೇಶಕಿ ಉಮಾ, ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ವ್ಯವಸ್ಥಾಪಕ ಸಿದ್ದು ಹರಸೂರ, ಜಿಲ್ಲಾ ವಿಎಲ್‌ಇ ಸೊಸೈಟಿ ಅಧ್ಯಕ್ಷ ಪಂಕಜ್‌ಕುಮಾರ ಜೋಶಿ ಮತ್ತು ಜಿಲ್ಲಾ ವಿಎಲ್‌ಇ ಸೊಸೈಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಹಾಗೂ ಸಿಎಸ್‍ಸಿ ಸೆಂಟರ್‌ನ ವಿಎಲ್‍ಇಗಳು ಭಾಗವಹಿಸಿದ್ದರು.

***

ಈ ಯೋಜನೆಯೂ ವಿದ್ಯಾರ್ಥಿಗಳಿಗಾಗಿ 10 ದಿನದ ಬೇಸಿಕ್ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ 500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ

ದೀಪಕ್‌ಕುಮಾರ ಶರ್ಮಾ, ಕೇಂದ್ರದ ಪಿಎಂಜಿ ದಿಶಾ ಮೇಲ್ವಿಚಾರಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.