ಶಹಾಪುರ: ಪ್ರಸಕ್ತ ವರ್ಷ ಮುಂಗಾರು ಉತ್ತಮದಾಯಕವಾಗಿದೆ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ರೈತರು ವಾಣಿಜ್ಯ ಬೆಳೆಯತ್ತ ಮುಖ ಮಾಡಿದ್ದಾರೆ.
ಲಾಕ್ಡೌನ್ ಜಾರಿ ಮಾಡಿದ್ದರಿಂದ ನಗರ ಪ್ರದೇಶಕ್ಕೆ ರೈತರು ಆಗಮಿಸಲು ಪರದಾಡುವಂತೆ ಆಗಿದೆ. ಕೆಲ ನಕಲಿ ಕಂಪನಿಯ ಬೀಜ ಮಾರಾಟಗಾರರು ಹಳ್ಳಿಗೆ ತೆರಳಿ ಬೀಜ ಮಾರಾಟ ಮಾಡುವ ಅಪಾಯವಿದೆ. ಕೃಷಿ ಇಲಾಖೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಅರಿವು ಮೂಡಿಸಬೇಕು. ನಕಲಿ ಬಿತ್ತನೆ ಬೀಜ ಮಾರಾಟ ತಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಕೃಷಿಕೂಲಿಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಾವಲಸಾಬ್ ನದಾಫ್ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಶುಕ್ರವಾರ ಸಂತೆಯ ದಿನ ಕೆಲ ವ್ಯಕ್ತಿಗಳು ಖುಲ್ಲಾ ಹತ್ತಿ ಬೀಜಗಳನ್ನು ತೆಗೆದುಕೊಂಡು ಬಂದು ರೈತರಿಗೆ ಮಾರಾಟ ಮಾಡುವ ಸಂಚು ನಡೆಸಿದ್ದಾರೆ. ಅಲ್ಲದೆ ಪಾಕೇಟ್ ಮೇಲೆ ವಿವಿಧ ಕಂಪನಿ ಹತ್ತಿ ಬೀಜ ಎಂದು ನಮೂದಿಸಿ ನಕಲಿ ಹತ್ತಿ ಬೀಜ ಮಾರಾಟ ಮಾಡುವ ಭೀತಿ ಇದೆ. ರೈತರು ಅಧಿಕೃತ ಅಂಗಡಿಯಲ್ಲಿ ಬೀಜವನ್ನು ತೆಗೆದುಕೊಳ್ಳಬೇಕು. ರಸೀದಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ.
ಅಲ್ಲದೆ ನಗರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟ ಮಾಡುವ ಅಂಗಡಿಯವರು ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಹತ್ತಿ ಬೀಜ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಂತಹ ಅಂಗಡಿಯನ್ನು ತಪಾಸಣೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.