ಯಾದಗಿರಿ: ದೆಹಲಿಯ ಜೆಎನ್ಯುನಲ್ಲಿ ನಡೆದ ಗೂಂಡಾಗಿರಿ ವಿರುದ್ಧ ಎಐಡಿಎಸ್ಒ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆನಡೆಸಲಾಯಿತು.
ಎಐಡಿಎಸ್ಒ ಜಿಲ್ಲಾ ಅಧ್ಯಕ್ಷ ಎಚ್.ಪಿ ಸೈದಪ್ಪ ಮಾತನಾಡಿ, ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ ಮತ್ತು ವಿದ್ಯಾರ್ಥಿಗಳು ಸೇರುವ ಸ್ಥಳಗಳಿಗೆ ನುಗ್ಗಿ ಸಿಕ್ಕ ಸಿಕ್ಕವರನ್ನು ಅದರಲ್ಲೂ ಜೆಎನ್ಯು ಶುಲ್ಕ ಹೆಚ್ಚಳ ವಿರೋಧಿಸುತ್ತಿರುವ ವಿದ್ಯಾರ್ಥಿಗಳನ್ನು ಗುರಿ ಮಾಡಿಕೊಂಡು ಮನಬಂದಂತೆ ದಾಳಿ ಮಾಡಿದ್ದಾರೆ. ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಎರಡು ತಿಂಗಳಿಂದ ನಡೆಯುತ್ತಿರುವ ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ವಿರುದ್ಧ ಆಡಳಿತ ವರ್ಗದ ಸಹಕಾರದೊಂದಿಗೆ ಕೋಮುವಾದಿ ಎಬಿವಿಪಿ ನಡೆಸಿದ ಈ ದಾಳಿಯು, ಆಡಳಿತ ವರ್ಗದ ಹೊಣೆಗೇಡಿತನವನ್ನು ತೋರಿಸುತ್ತದೆ. ಶುಲ್ಕ ಹೆಚ್ಚಳ ವಿರೋಧಿ ಹೋರಾಟದ ದಿಕ್ಕು ತಪ್ಪಿಸಲು ಮತ್ತು ವಿದ್ಯಾರ್ಥಿ ಸಮುದಾಯದಲ್ಲಿ ಭಯ ಮೂಡಿಸಲು ಆಡಳಿತ ವರ್ಗ ಮತ್ತು ಎಬಿವಿಪಿ ಈ ಕುತಂತ್ರ ಹೆಣೆದಿವೆ ಎಂದು ದೂರಿದರು.
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಶುಲ್ಕ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷೆ ಬಿ.ಸಿಂಧೂ ನೇತೃತ್ವ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಬಿ.ಕೆ ಸುಭಾಷಚಂದ್ರ, ಸಹ ಕಾರ್ಯದರ್ಶಿ ಕೆ.ಎಸ್ ಚೇತನಾ, ನಾಗರಾಜ, ಮಲ್ಲಪ್ಪ ಅರಿಕೇರಾ, ಪ್ರಕಾಶ, ಪರಶುರಾಮ, ಭರತ್ ಕುಮಾರ, ಮಾಳಪ್ಪ, ರೇಣುಕಾ, ನಯನಾ, ನಾಗಮ್ಮ, ಐಶ್ವರ್ಯ, ಸುಜಾತ, ಮಧು, ಹೀನಾಕೋಸಂ, ಆನಂದ, ಶಿವಶಂಕರ, ಮಹ್ಮದ್ ಐಮದ್, ಸಿದ್ದು, ಸ್ವಾಮಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.