ಯಾದಗಿರಿ: ನವೋದಯ ಹರಿಕಾರ ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿಯನ್ನು ಕೋಲ್ಕತ್ತದಲ್ಲಿ ಧ್ವಂಸಗೊಳಿಸಿದ್ದನ್ನು ಎಐಡಿಎಸ್ಒ ಪದಾಧಿಕಾರಿಗಳು ಖಂಡಿಸಿ ನಗರದಲ್ಲಿ ಗುರುವಾರ ಸಂಜೆ ಪ್ರತಿಭಟನೆ ನಡೆಸಿದರು.
ಕೋಲ್ಕತ್ತದಲ್ಲಿ ಮಂಗಳವಾರ ನಡೆದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರೋಡ್ ಷೋ ವೇಳೆ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿ ಧ್ವಂಸ ಪ್ರಕರಣವನ್ನು ಖಂಡಿಸಿ ನಗರದ ಸುಭಾಷ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರಲ್ಲಿ ಘರ್ಷಣೆ ನಡೆದು ಬಿಜೆಪಿ ಕಾರ್ಯಕರ್ತರು ವಿದ್ಯಾಸಾಗರ್ ಕಾಲೇಜಿನ ಒಳಗೆ ನುಗ್ಗಿ ನವೋದಯ ಚಿಂತಕ ಹಾಗೂ ಮಹಾನ್ ಮಾನವತಾವಾದಿ ಈಶ್ವರಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಇದು ಖಂಡನೀಯ ಎಂದು ಆಪಾದಿಸಿದರು.
ಈಶ್ವರಚಂದ್ರರು ಕೇವಲ ಬಂಗಾಳಕ್ಕೆ ಮಾತ್ರವಲ್ಲ; ರಾಷ್ಟ್ರಕ್ಕೆ ನಾಯಕ ಎಂದು ವಿವೇಕಾನಂದರು ಹೇಳಿದ್ದರು. ಸುಭಾಷ್ಚಂದ್ರ ಬೋಸ್ ಇವರನ್ನು ಅತ್ಯಂತ ಉನ್ನತ ಸ್ಥಾನದಲ್ಲಿ ಕಂಡಿದ್ದರು. ಈಗ ರಾಜಕೀಯ ಹಿತಾಸಕ್ತಿಗಳು ಬಂಗಾಳದ ಸಾಂಸ್ಕೃತಿಕ ಪರಂಪರೆ ನಾಶಗೊಳಿಸುತ್ತಿದೆ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.