ಸುರಪುರ: ರಂಗಂಪೇಟೆಯ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ಮಂದಿರದ 52ನೇ ವರ್ಧಂತಿ ಉತ್ಸವ ಗುರುವಾರ ಶ್ರದ್ಧಾ, ಭಕ್ತಿಯಿಂದ ಜರುಗಿತು.
ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿದು ತಳಿರು, ತೋರಣ ಕಟ್ಟಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ ಸುಪ್ರಭಾತ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ದೇವಿಯ ಅಲಂಕಾರ, ಮಹಾಪೂಜೆ, ನವ ಚಂಡಿಕಾಯಾಗ, ಗಣ ಹೋಮ ನಂತರ ಪೂರ್ಣಾಹುತಿ ನಡೆಯಿತು.
ದೇವಿಯ ಸಪ್ತಶತಿ ಪಾರಾಯಣ, ಲಲಿತ ಸಹಸ್ರನಾಮ ಪಠಣ, ಮಾತಾ ಅಂಬಾಭವಾನಿ ಅಷ್ಟಕ, ಮಹಾಮಂಗಳಾರತಿ, ಧೂಪ ದೀಪ, ನೈವೇದ್ಯ, ಮಂತ್ರಪುಷ್ಪ, ತೀರ್ಥ ಪ್ರಸಾದ ವಿನಿಯೋಗ ನಂತರ ಮಹಿಳೆಯರಿಗೆ ಉಡಿ ತುಂಬಲಾಯಿತು.
ರಂಗಂಪೇಟೆಯ ಆಂಜನೇಯ ದೇವಸ್ಥಾನದಿಂದ ಅಂಬಾಭವಾನಿ ದೇವಸ್ಥಾನದವರೆಗೆ ಸುಮಂಗಲಿಯರಿಂದ ಪೂರ್ಣ ಕುಂಭ ಮೆರವಣಿಗೆ ಮತ್ತು ಪಲ್ಲಕ್ಕಿ ಮೆರವಣಿಗೆ ಜರುಗಿತು. ಅಂಬಾಭವಾನಿ ಮಾತಾಕೀ ಜೈ... ಎಂಬ ಮಂತ್ರ ಘೋಷ ಮೊಳಗಿತು. ಬಾಜಾ, ಭಜಂತ್ರಿ, ವಾದ್ಯ ಮೇಳಕ್ಕೆ ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದರು.
ಧರ್ಮ ಸಭೆಯಲ್ಲಿ ಅರ್ಚಕ ಭೀಮರಾವ ಪತಂಗೆ ಮಾತನಾಡಿ, ‘ಪುರಾಣದ ಪ್ರಕಾರ ಅಂಬಾಭವಾನಿಗೆ ಹೆಚ್ಚಿನ ಮಹತ್ವವಿದೆ. ಜಗತ್ತಿನ ಅಷ್ಟ ಶಕ್ತಿ ಮತ್ತು ಸಕಲ ಐಶ್ವರ್ಯಗಳಿಗೆ ಅಧಿದೇವತೆಯಾಗಿದ್ದಾಳೆ. ಇತ್ತೀಚಿಗೆ ಯುವಕರಲ್ಲಿ ನೈತಿಕ ಮತ್ತು ಧಾರ್ಮಿಕ ಮೌಲ್ಯಗಳು ಕುಸಿಯುತ್ತಿವೆ. ಯುವಕರು ಧರ್ಮ ಮತ್ತು ದೇವರಲ್ಲಿ ನಂಬಿಕೆ ಸನ್ಮಾರ್ಗದಲ್ಲಿ ನಡೆಯಬೇಕು’ ಎಂದರು.
ಸಂಜೆ ಸಂಗೀತ ಮತ್ತು ಭಜನೆ ನಡೆಯಿತು. ಶರಣಯ್ಯ ಸ್ವಾಮಿ ಬಳ್ಳುಂಡಗಿಮಠ ಚಾಲನೆ ನೀಡಿದರು. ಮೋಹನ ಮಾಳದಕರ, ಶರಣಪ್ಪ ಕಮ್ಮಾರ. ಶ್ರೀನಿವಾಸ ದಾಯಿಪುಲೆ. ಮಹಾಂತೇಶ ಶಹಾಪುರಕರ, ಪ್ರಾಣೇಶ ಕುಲಕರ್ಣಿ, ಜಗದೀಶ ಮಾನು, ಸುರೇಶ ಅಂಬೂರೆ, ಗುರುನಾಥರೆಡ್ಡಿ, ಅಶೋಕ ಬಾಸೂತ್ಕರ್, ಸಂಗೀತ ಸೇವೆ ನೀಡಿದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಅರುಣಕುಮಾರ ಪುಲ್ಸೆ, ಪ್ರಮುಖರಾದ ರಾಜು ಪುಲ್ಸೆ, ಭೂಮದೇವ ಮಹೇಂದ್ರಕರ್, ತಿರುಪತಿ ಮಾಳದಕರ, ನಾಗೇಶ ಅಂಬೂರೆ, ಶಂಕರರಾವ ಮಹೇಂದ್ರಕರ್, ರಾಜು ಮಹೇಂದ್ರಕರ್, ವಿಶ್ವನಾಥ ಅಂಬೂರೆ, ಅಶೋಕ, ಚಂದ್ರಕಾಂತ, ರಾಮು, ಡಾ. ಓಂ ಪ್ರಕಾಶ ಅಂಬೂರೆ, ಮೋಹನ ರಂಗದಾಳ, ನಾಗೇಶ ಪತಂಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.