ಯಾದಗಿರಿ: ಯಾದಗಿರಿ ಜಿಲ್ಲಾ ಕೇಂದ್ರವಾಗಿ 15 ವರ್ಷಗಳಾದರೂ ಆಟೊ ನಗರ ನಿರ್ಮಾಣವಾಗಿಲ್ಲ. ಹೀಗಾಗಿ, ಆಟೊ ನಗರ ಘೋಷಣೆ ಮಾಡಬೇಕು ಎಂದು ಗಿರಿನಾಡು ಟ್ಯಾಕ್ಸಿ ಕಾರು ಚಾಲಕರ ಜಿಲ್ಲಾ ಘಟಕದ ಮುಖಂಡರು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಈಚೆಗೆ ಮನವಿ ಮಾಡಿದ್ದಾರೆ.
ಆಟೊ ನಗರ ನಿರ್ಮಾಣ ಮಾಡಿದರೆ ಬಡ ಕಾರ್ಮಿಕರು ಮತ್ತು ಚಾಲಕರಿಗೆ ಅನುಕೂಲವಾಗುತ್ತದೆ. ಸಾರಿಗೆ ಕ್ಷೇತ್ರವೂ ಬೆಳವಣಿಗೆಯಾ ಉದ್ಯೋಗ ಸೃಷ್ಟಿಯಾಗುತ್ತವೆ ಎಂದು ಕೋರಿದ್ದಾರೆ.
ಚಾಲಕರು, ಕಾರ್ಮಿಕರು ಕೆಲಸದ ವೇಳೆ ಸಾವನ್ನಪ್ಪಿದ್ದರೆ ಸರ್ಕಾರದ ಸಹಾಯ ಧನವು ₹ 5 ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಬಾಡಿಗೆ ಲಘು ವಾಹನ ನಿಲುಗಡೆ ಮಾಡಲಾಗಿದೆ. ಆದರೆ, ಮೂಲಸೌಕರ್ಯ ಇರುವುದಿಲ್ಲ. ವಿಶೇಷ ಮೂಲಸೌಕರ್ಯ ಒದಗಿಸಬೇಕು. ಚಾಲಕರಿಗೆ ಬ್ಯಾಡ್ಜ್, ಲೈಸೆನ್ಸ್ ಮಾಡಲು ಮುಂದಾಗಬೇಕು ಎಂದು ಹೇಳಿದ್ದಾರೆ.
ಕಾರ್ಮಿಕ ಇಲಾಖೆಯಿಂದ ಕಾರ್ಮಿಕರು, ಚಾಲಕರಿಗೆ ಉಪಕರಣಗಳ ಕಿಟ್, ಸಮವಸ್ತ್ರ, ಪ್ರಥಮ ಚಿಕಿತ್ಸೆಯ ಬಾಕ್ಸ್ಗಳನ್ನು ನೀಡಬೇಕು. ಸಾರ್ವಜನಕರಿಗೆ ಉತ್ತಮ ಸೇವೆ ಸಲ್ಲಿಸುವ ಚಾಲಕರು ಮತ್ತು ಕಾರ್ಮಿಕರನ್ನು ಗುರುತಿಸಿ, ಬಹುಮಾನ ಕೊಡಬೇಕು. ಇದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬಿದಂತೆ ಆಗುತ್ತದೆ. ಪಿಎಂಎಜಿಪಿ ನಿಗಮ ಮಂಡಳಿಗಳಿಂದ ಲಘು ವಾಹನ, ಆಟೊಗಳಿಗೆ ರಿಯಾಯಿತಿ ದರದಲ್ಲಿ ಸಾಲ ನೀಡುವ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು ಎಂದಿದ್ದಾರೆ.
ಚಾಲಕರ ಮಕ್ಕಳಿಗೆ 8ನೇ ತರಗತಿಯಿಂದ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು 1ನೇ ತರಗತಿಯಿಂದ ಕೊಡಬೇಕು. ರಸ್ತೆ ಅಪಘಾತಕ್ಕೆ ಒಳಗಾದ ಚಾಲಕರು, ಕಾರ್ಮಿಕರಿಗೆ ಸರ್ಕಾರದಿಂದ ಎಲ್ಲಾ ರೀತಿಯ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯಿಂದ ಮುಂಬೈ, ಬೆಂಗಳೂರಿನಂತಹ ಮಹಾ ನಗರಗಳಿಗೆ ಗುಳೆ ಹೋಗಿರುವ ಕಾರ್ಮಿಕರಿಗೆ ಕಷ್ಟ ಕಾಲದಲ್ಲಿ ನೆರವಾಗಲು ಸಹಾಯವಾಣಿ ಕೇಂದ್ರ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಖಿಲ ಭಾರತ ಕೋಲಿ ಸಮಾಜ ರಾಜ್ಯ ಘಟಕದ ಮುಖಂಡ ಉಮೇಶ ಕೆ. ಮುದ್ನಾಳ, ಚಾಲಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಇಟಗಿ, ರಾಜ್ಯ ಚಾಲಕರ ಪರಿಷತ್ ಆಟೊ ಚಾಲಕರ ಸಂಘದ ಅಧ್ಯ ಲಕ್ಷ್ಮಣ ಚವ್ಹಾಣ್, ತಾಲ್ಲೂಕು ಗ್ಯಾರೇಜ್ ಮಾಲೀಕರು ಮತ್ತು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಪ್ಪ ಕೌಳೂರು ಸೇರಿ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.