ಶಹಾಪುರ: ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮತ್ತು ವಾಲ್ಮೀಕಿ ಸಮುದಾಯದ ಪರಿಶಿಷ್ಟ ಪಂಗಡ ಸಮುದಾಯಕ್ಕೆ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸಿದರೆ ಇಲ್ಲಿನ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನಾಗಿ ನೇಮಿಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಇಲ್ಲಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಬುಧವಾರ ಶಹಾಪುರು ನಾಗರಿಕ ಸಮಿತಿ ಹಾಗೂ ಹಿತೈಷಿಗಳು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕೊಂಡ ಡಾ.ರಂಗರಾಜ ವನದುರ್ಗ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಲೋಕಸೇವಾ ಆಯೋಗದ ಸದಸ್ಯತ್ವ ಸಾಂವಿಧಾನಿಕ ಹುದ್ದೆಯಾಗಿದೆ. ಇಲ್ಲಿನ ಭಾಗದ ನಿರುದ್ಯೋಗ ಯುವಕರಿಗೆ ವಿದ್ಯಾರ್ಹತೆ ಮೇಲೆ ಬಡ ಪ್ರತಿಭಾವಂತೆ ಯುವಕರಿಗೆ ಕಾನೂನು ಅಡಿಯಲ್ಲಿ ನೆರವು ಸಿಗಲಿ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಸಗರನಾಡಿನ ಭಾಗದ ಸದಸ್ಯರನ್ನಾಗಿ ನೇಮಿಸಲು ಶ್ರಮಿಸಿದ ಸಚಿವ ಶ್ರೀರಾಮುಲು ಅವರಿಗೆ ಶಹಾಪುರ ತಾಲ್ಲೂಕಿನ ಸಮಸ್ತ ಜನತೆ ಅಭಿನಂದಿಸುತ್ತದೆ. ಅತ್ಯಂತ ಉನ್ನತ ಹುದ್ದೆಯಲ್ಲಿ ನಮ್ಮವರು ಇರುವುದರಿಂದ ಕಾನೂನು ಚೌಕಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲಿ ಎಂದರು.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ರಂಗರಾಜ ವನದುರ್ಗ ಮಾತನಾಡಿ, ಕಳೆದ 30 ವರ್ಷದಿಂದ ಸರ್ಕಾರಿ ಸೇವೆ ಮಾಡಿರುವೆ. ಬಳ್ಳಾರಿ ಮತ್ತು ಬೆಳಗಾವಿ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ 9 ವರ್ಷ ಸೇವೆ ಸಲ್ಲಿಸಿರುವೆ. 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾಧಾನ ಮಾಡಿರುವೆ. ನೀವು ನನ್ನ ಮೇಲೆ ಇಟ್ಟ ನಂಬಿಕೆ ಮತ್ತು ನಿಷ್ಠೆಗೆ ಎಂದಿಗೂ ಮೋಸ ಮಾಡುವುದಿಲ್ಲ. ಉನ್ನತ ಹುದ್ದೆಗೆ ತಲುಪಲು ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿರುವೆ ಎಂದರು.
ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಶರಣಪ್ಪ ಸಲಾದಪುರ, ದೇವಿಂದ್ರಪ್ಪಗೌಡ ಗೌಡಗೇರಿ, ಮರಿಗೌಡ ಪಾಟೀಲ ಹುಲಕಲ್, ಹಣಮಂತರಾಯ ದೊರೆ ದಳಪತಿ, ಅಮಾತೆಪ್ಪ ಕಂದಕೂರ, ಚಂದ್ರಶೇಖರ ಆರಬೋಳ, ಡಾ.ಮಲ್ಲಣ್ಣಗೌಡ ಉಕ್ಕನಾಳ, ವಿಶ್ವನಾಥರಡ್ಡಿ ದರ್ಶನಾಪುರ, ಹನುಮೇಗೌಡ ಮರಕಲ್, ಆರ್. ಚೆನ್ನಬಸ್ಸು ವನದುರ್ಗ, ಹಣಮಪ್ಪ ನಾಯಕ (ಬಬ್ಲೂಗೌಡ) ಹನುಮೇಗೌಡ ಬೀರಣಕಲ್ ಮರೆಪ್ಪ ಪ್ಯಾಟಿ ಶಿರವಾಳ, ಶಾಂತಗೌಡ ಚೆನ್ನಪಟ್ಟಣ, ಗೌಡಪ್ಪಗೌಡ ಆಲ್ದಾಳ, ಸತ್ಯನಾರಾಯಣ ಅನವಾರ, ಗಿರೆಪ್ಪಗೌಡ ಬಾಣತಿಹಾಳ, ಅಯ್ಯಣ್ಣ ಕನ್ಯಾಕೊಳ್ಳೂರ, ಎಲ್ಬಿಕೆ ಆಲ್ದಾಳ, ಸಿದ್ದರಾಮ ಹೊನ್ಕಲ್, ಡಾ.ಭೀಮಣ್ಣ ಮೇಟಿ, ನೀಲಕಂಠ ಬಡಿಗೇರ, ರಾಮಚಂದ್ರ ಕಾಶಿರಾಜ, ಡಾ.ಚಂದ್ರಶೇಖರ ಸುಬೇದಾರ, ವಸಂತ ಸುರಪುರಕರ್, ಶಿವರಾಜ ದೇಶಮುಖ, ಟಿ.ಎನ್. ಭೀಮುನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.