ADVERTISEMENT

ಯಾದಗಿರಿ: ತ್ಯಾಗದ ಹಬ್ಬ ಬಕ್ರೀದ್ ಸಂಭ್ರಮಕ್ಕೆ ಸಿದ್ಧತೆ

ಕೋವಿಡ್ ಮಾರ್ಗಸೂಚಿ ಪಾಲಿಸಿ, ಸರಳವಾಗಿ ಆಚರಿಸಿ: ಜಿಲ್ಲಾಧಿಕಾರಿ ರಾಗಪ್ರಿಯಾ

​ಪ್ರಜಾವಾಣಿ ವಾರ್ತೆ
Published 20 ಜುಲೈ 2021, 13:59 IST
Last Updated 20 ಜುಲೈ 2021, 13:59 IST
ಯಾದಗಿರಿ ನಗರದ ಮಸ್ಜಿದ್ ಎ ಸಾದರ್ ದರ್ವಾಜದಲ್ಲಿ ಬಕ್ರೀದ್ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ
ಯಾದಗಿರಿ ನಗರದ ಮಸ್ಜಿದ್ ಎ ಸಾದರ್ ದರ್ವಾಜದಲ್ಲಿ ಬಕ್ರೀದ್ ಪ್ರಾರ್ಥನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ   

ಯಾದಗಿರಿ: ಮುಸ್ಲಿಂ ಸಮುದಾಯದವರು ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸರಳವಾಗಿ ಬಕ್ರೀದ್ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

‘ಪ್ರವಾದಿ ಹಜರತ್ ಇಬ್ರಾಹಿಮ್ ಖಲೀಲುಲ್ಲಾ ಅವರು ದೇವರ ಆಪೇಕ್ಷೆಯಂತೆ 'ಇಷ್ಟವಾದ ಜೀವವನ್ನು ಬಲಿ ನೀಡಲು' ತಮ್ಮ ಪ್ರೀತಿಯ ಪುತ್ರ ಇಸ್ಮಾಯಿಲ್‌ನನ್ನು ಬಲಿ ನೀಡಲು ಮುಂದಾಗುತ್ತಾನೆ. ಆಗ ದೇವದೂತ ಜಿಬ್ರಾಯಿಲ್ ಪ್ರತ್ಯಕ್ಷನಾಗಿ, 'ಮಗನನ್ನು ಬಲಿ ನೀಡುವ ಬದಲು ಕುರಿಯೊಂದನ್ನು ಬಲಿ ನೀಡಿದರೆ ಸಾಕು' ಎನ್ನುವ ಮೂಲಕ ಖಲೀಲುಲ್ಲಾರ ತ್ಯಾಗವನ್ನು ಜಗತ್ತಿಗೆ ಸಾರಿದ ದಿನವೆಂದು, ಅದಕ್ಕಾಗಿ ಬಕ್ರೀದ್ (ಈದ್-ಉಲ್-ಫಿತರ್) ಆಚರಿಸಲಾಗುತ್ತದೆ‘ ಎಂದು ಖಾಜಿ ಮಹಮ್ಮದ್‌ ಅಫ್ಜಾಲುದ್ದೀನ್‌ ಸಿದ್ದಿಕಿ ಹೇಳುತ್ತಾರೆ.

ಮಾರ್ಗಸೂಚಿಗಳು: ಪ್ರಾರ್ಥನಾ ಕೇಂದ್ರದ ಸಾಮರ್ಥ್ಯದ ಗರಿಷ್ಠ ಶೇ 50 ಜನ ಮಾತ್ರ ಸೇರುವುದು, ಪ್ರಾರ್ಥನೆ ಸಲ್ಲಿಸುವಾಗ 6 ಅಡಿಗಳ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಬೆಳಿಗ್ಗೆ 10:30ರ ವೇಳೆಗೆ ಪ್ರಾರ್ಥನಾ ವಿಧಿಗಳನ್ನು ಮುಗಿಸಿಕೊಳ್ಳುವುದು, ಪರಸ್ಪರ ಆಲಿಂಗನಾ, ಹಸ್ತಲಾಘವ ಮಾಡುವಂತಿಲ್ಲ, ರಸ್ತೆ, ಪಾದಾಚಾರಿ ಮಾರ್ಗ, ನರ್ಸಿಂಗ್ ಹೋಮ್, ಮೈದಾನ, ಧಾರ್ಮಿಕ ಸ್ಥಳಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ಹಾಗೂ ಉತ್ಸವಗಳನ್ನು ಮಾಡದಿರುವುದು ಸೇರಿದಂತೆ ಹಲವು ಕೋವಿಡ್‌ ಮಾರ್ಗಸೂಚಿಗಳನ್ನು ನೀಡಲಾಗಿದೆ.

ADVERTISEMENT

***
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಬಕ್ರೀದ್ ಹಬ್ಬ ಆಚರಿಸಬೇಕು. ಹಬ್ಬಗಳಲ್ಲಿನ ಉತ್ತಮ ಸಂದೇಶಗಳನ್ನು ಅರಿತು ಆಚರಣೆ ಮಾಡುವುದು ಹೆಚ್ಚಿನ ಸಂತಸ ನೀಡುತ್ತದೆ.
-ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

***

ಕೋವಿಡ್ ಕಾರಣದಿಂದ ಈ ವರ್ಷ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸುತ್ತಾ, ಸರಳವಾಗಿ ಹಬ್ಬವನ್ನು ಆಚರಿಸಲಾಗುತ್ತಿದೆ.
-ಮೌಲಾನ ನಿಜಾಮುದ್ದೀನ್ ಬರ್ಕತಿ, ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.