ADVERTISEMENT

ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥ;ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ: ಕನ್ನಳ್ಳಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:20 IST
Last Updated 21 ಜನವರಿ 2026, 4:20 IST
ಸೈದಾಪುರ ಸಮೀಪದ ಬೆಳಗುಂದಿ ಗ್ರಾಮದ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ, ಇಸಿಒ, ಸಿಆರ್‌ಪಿ ಭೇಟಿ ನೀಡಿ ಅಡುಗೆ ಕೋಣೆ, ದವಸ ಧಾನ್ಯ ಪರಿಶೀಲಿಸಿದರು
ಸೈದಾಪುರ ಸಮೀಪದ ಬೆಳಗುಂದಿ ಗ್ರಾಮದ ಸರ್ಕಾರಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ, ಇಸಿಒ, ಸಿಆರ್‌ಪಿ ಭೇಟಿ ನೀಡಿ ಅಡುಗೆ ಕೋಣೆ, ದವಸ ಧಾನ್ಯ ಪರಿಶೀಲಿಸಿದರು   

ಬೆಳಗುಂದಿ (ಸೈದಾಪುರ): ಸಮೀಪದ ಬೆಳಗುಂದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 55 ಮಕ್ಕಳು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನೇಳ್ಳಿ ಮಂಗಳವಾರ ಭೇಟಿ ನೀಡಿ ಪರಿಶೀಲನೆ ಮಾಡಿ, ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಿ ಎಂದು ಅಡುಗೆ ಸಿಬ್ಬಂದಿಯವರಿಗೆ ಸೂಚಿಸಿದರು.

‘ಸೋಮವಾರ ಮಧ್ಯಾಹ್ನ ಮಾಡಿದ ಬಿಸಿಬೇಳೆಬಾತ್ ಸರಿಯಾಗಿ ಬೆಂದಿರದ ಕಾರಣ ಅದನ್ನು ಸೇವಿಸಿದ ಮಕ್ಕಳಲ್ಲಿ ನಾಲ್ಕೈದು ಮಕ್ಕಳಿಗೆ ವಾಂತಿ ಆಗಿದೆ. ಘಟನೆ ಸಂಭವಿಸಿದ ತಕ್ಷಣದಿಂದ ವೈದ್ಯರ ಜೊತೆಗೆ ನಿರಂತರವಾಗಿ ಚರ್ಚಿಸುತ್ತ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ಎಲ್ಲ ಮಕ್ಕಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿದ್ದು, ಇದೀಗ ಎಲ್ಲರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಪಾಲಕರು ಮತ್ತು ವಿದ್ಯಾರ್ಥಿಗಳು ಯಾವುದೇ ಭಯಪಡುವಂತ ಅಗತ್ಯವಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೀರಪ್ಪ ಕನ್ನಳ್ಳಿ ತಿಳಿಸಿದರು.

ಸೋಮವಾರ ಮಧ್ಯಾಹ್ನದ ಅವಧಿಗೆ ತಯಾರಿಸಿದ ಬಿಸಿಬೇಳೆ ಬಾತ್ ಸೇವಿಸಿ ಶಾಲಾವಧಿ ನಂತರ ಒಂದರಿಂದ ಎಂಟನೇ ತರಗತಿ ಮಕ್ಕಳಲ್ಲಿ ಏಕಾಏಕಿ ವಾಂತಿ, ಭೇದಿ, ಹೊಟ್ಟೆ ನೋವು, ತಲೆಸುತ್ತು ಕಾಣಿಸಿಕೊಂಡಿದೆ. ಸಂಜೆ ಪಾಲಕರು ಬಂದ ನಂತರ ಮಕ್ಕಳಿಗೆ ಹೊಟ್ಟೆ ನೋವು ಮತ್ತು ವಾಂತಿ ಹೆಚ್ಚಾಗುತ್ತಿದ್ದಂತೆ ಪಟ್ಟಣದ ಖಾಸಗಿ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ADVERTISEMENT

ಸೋಮವಾರ ರಾತ್ರಿಯೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಮಕ್ಕಳ ಆರೋಗ್ಯದ ಬಗ್ಗೆ ಚರ್ಚಿಸಿದರು. ಪಾಲಕರು ಭಯಪಡುವ ಅಗತ್ಯವಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ತಿಳಿಸಿದ ನಂತರ ಪಾಲಕರು ತಮ್ಮ ಮಕ್ಕಳನ್ನು ರಾತ್ರಿಯೇ ಮನೆಗೆ ಕರೆದುಕೊಂಡು ಹೋಗಿದ್ದರು.

ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಭೇಟಿ: ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ಪರಿಶೀಲನೆಗೆ ಮಂಗಳವಾರ ಬೆಳಿಗ್ಗೆ ಜಿಲ್ಲಾ ಆರೋಗ್ಯ ಕೇಂದ್ರದ ಐಡಿಎಸ್‍ಪಿ ಇಲಾಖೆಯ ತಂಡ, ಮಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಯಶವಂತ ರಾಠೋಡ, ಬೆಳಗುಂದಿ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಪ್ರಕೃತಿ ಹಾಗೂ ಶಿಕ್ಷಣ ಇಲಾಖೆಯ ಬಿಇಒ, ಇಸಿಒ, ಸಿಆರ್‌ಪಿ ಸೇರಿದಂತೆ ಇತರರು ಶಾಲೆಗೆ ತೆರಳಿ ಅಡುಗೆ ಕೋಣೆ, ಸಾಮಗ್ರಿ, ದವಸ ಧಾನ್ಯ ಪರಿಶೀಲಿಸಿ ಅಡುಗೆ ಸಿಬ್ಬಂದಿಯವರಿಗೆ ಸ್ವಚ್ಛತೆ ಸೇರಿದಂತೆ ಕೆಲ ಸಲಹೆ ಸೂಚನೆಗಳು ಹಾಗೂ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಇಸಿಒ ಚಾಂದ್‍ಪಟೇಲ್, ಸಿಆರ್‌ಪಿ ಲಿಂಗಾರೆಡ್ಡಿ ಗಬ್ಬೂರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಂಕಪ್ಪ ದೊಡ್ಡಮನಿ, ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ ಸಂಬ್ರ, ಪಿಡಿಒ ಶಂಕರಪ್ಪ.ಜಿ ನಾಯಕ, ಹಾಗೂ ಪಾಲಕರು, ಗ್ರಾಮಸ್ಥರು, ಸೇರಿದಂತೆ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.