ADVERTISEMENT

‘ಭಗವದ್ಗೀತೆ ಮಾನವ ಕುಲಕ್ಕೆ ದಾರಿ ದೀಪ’

ಕರ್ನಾಟಕ ಭಗವದ್ಗೀತಾ ಅಭಿಯಾನದಲ್ಲಿ ಪಂಡಿತ್‌ ನರಸಿಂಹಾಚಾರ್ಯ ಪುರಾಣಿಕ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 13:51 IST
Last Updated 8 ಡಿಸೆಂಬರ್ 2018, 13:51 IST
ಯಾದಗಿರಿಯ ಮಾತಾಮಾಣಿಕೇಶ್ವರಿ ಬಡಾವಣೆಯ ವೀರಾಂಜನೇಯಸ್ವಾಮಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ಭಗವದ್ಗೀತಾ ಅಭಿಯಾನದಲ್ಲಿ ಪಂಡಿತ್‌ ನರಸಿಂಹಾಚಾರ್ಯ ಪುರಾಣಿಕ ಮಾತನಾಡಿದರು
ಯಾದಗಿರಿಯ ಮಾತಾಮಾಣಿಕೇಶ್ವರಿ ಬಡಾವಣೆಯ ವೀರಾಂಜನೇಯಸ್ವಾಮಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ಭಗವದ್ಗೀತಾ ಅಭಿಯಾನದಲ್ಲಿ ಪಂಡಿತ್‌ ನರಸಿಂಹಾಚಾರ್ಯ ಪುರಾಣಿಕ ಮಾತನಾಡಿದರು   

ಯಾದಗಿರಿ:‘ ಭಗವದ್ಗೀತೆ ಕೇವಲ ಧರ್ಮಗ್ರಂಥ, ಮಹಾಕಾವ್ಯ ಅಲ್ಲ. ಅದು ಮನುಕುಲಕ್ಕೆ ದಾರಿದೀಪವಾಗಿದೆ. ಅದನ್ನು ಅಧ್ಯಯನ ಮಾಡುವ ಮೂಲಕ ಬದುಕಿನ ಮುಕ್ತಿಮಾರ್ಗ ಕಂಡುಕೊಳ್ಳಬಹುದು’ ಎಂದು ಪಂಡಿತ್‌ ನರಸಿಂಹಾಚಾರ್ಯ ಪುರಾಣಿಕ ಅಭಿಪ್ರಾಯಪಟ್ಟರು.

ಇಲ್ಲಿನ ಮಾತಾಮಾಣಿಕೇಶ್ವರಿ ಬಡಾವಣೆಯಲ್ಲಿನ ವೀರಾಂಜನೇಯಸ್ವಾಮಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಕರ್ನಾಟಕ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಭಗವದ್ಗೀತೆಯಲ್ಲಿ ಇರುವ ಬದುಕಿನ ವಿಮರ್ಶೆ ಪ್ರತಿಯೊಬ್ಬರ ಜೀವನಕ್ಕೆ ಅನ್ವಯಿಸುತ್ತದೆ. ಅಲ್ಲಿ ಕಂಡುಬರುವ ದೃಶ್ಯ, ಪಾತ್ರಗಳ ಸವಾಲು ಸಮಸ್ಯೆಗಳು ಎಲ್ಲರ ಬದುಕಿನಲ್ಲೂ ಎದುರಾಗುತ್ತವೆ. ಹಾಗಾಗಿ, ಸಾಮಾನ್ಯರ ಬದುಕಿಗೂ ಭಗವದ್ಗೀತೆ ಅನ್ವಯಿಸುತ್ತದೆ. ಆದ್ದರಿಂದ, ಭಗವವದ್ಗೀತೆಯ ಅಧ್ಯಯನ ಅಗತ್ಯ’ ಎಂದರು.

ADVERTISEMENT

‘ಭಗವದ್ಗೀತೆ ಮಹಾಕಾವ್ಯ ಕೇವಲ ತ್ರೇತಾಯುಗ, ದ್ವಾಪರಯುಗದ ಮಾಹಿತಿ ನೀಡುವುದಿಲ್ಲ. ಈಗಿನ ಕಲಿಯುಗದಲ್ಲಿ ಪರಮಾತ್ಮನ ಅನುಗ್ರಹ ದೊರೆಯುವ ಮಾರ್ಗದ ಬಗ್ಗೆಯೂ ಸಲಹೆಗಳಿವೆ. ಮನಸ್ಸಿನ ನಿಗ್ರಹ, ಬದುಕಿನ ಯಶಸ್ಸು, ಮುಕ್ತಿಯ ಮಾರ್ಗಗಳನ್ನು ಈ ಕಾವ್ಯದಲ್ಲಿ ಶ್ರೀಕೃಷ್ಣ ಪರಮಾತ್ಮ ವಿವರಿಸುತ್ತಾನೆ. ಅದು ಅಣುರೇಣುಗಳಿಗೂ ಅನ್ವಯಿಸುತ್ತದೆ. ಜೀವರಾಶಿ ಕುರಿತು ಸಮಗ್ರ ವಿವರಗಳನ್ನು ನಾವು ಭಗವದ್ಗೀತೆಯಲ್ಲಿ ಪಡೆಯಬಹುದು’ ಎಂದು ಹೇಳಿದರು.

‘ಅರ್ಜುನ– ಶ್ರೀಕೃಷ್ಣರ ಅನುಸಂಧಾನ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ. ವಿಷ್ಣುವಿನ ಸಹಸ್ರನಾಮ ಕೂಡ ಮುಕ್ತಿಯನ್ನು ನೀಡುತ್ತದೆ. ಹಾಗಾಗಿ, ಭಗವದ್ಗೀತೆ ಅನಿವಾರ್ಯ ಕೂಡ ಅನಿಸುತ್ತದೆ’ ಎಂದರು.

ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ‘ಭಗವದ್ಗೀತಾ ಅಭಿಯಾನವನ್ನು ಇಡೀ ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಡಿ.18 ರಂದು ಧಾರವಾಡದಲ್ಲಿ ಸಮರ್ಪಣೆ ನಡೆಯಲಿದೆ. ಭಗವದ್ಗೀತೆಯ ಮೂಲಕ ಸಮಾಜದಲ್ಲಿ ಶಾಂತಿ ನೆಲೆಸಲು ಮತ್ತು ಪ್ರತಿ ವ್ಯಕ್ತಿಯನ್ನು ಸುಸಂಕೃತರನ್ನಾಗಿ ರೂಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ’ ಎಂದು ಹೇಳಿದರು.

ಅಭಿಯಾನದ ಸಂಚಾಲಕ ಅನಿಲ ದೇಶಪಾಂಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.