ಸುರಪುರ: ‘ಸುರಪುರ ಮತ್ತು ಮೈಸೂರು ಸಂಸ್ಥಾನಕ್ಕೆ ಅವಿನಾಭಾವ ಸಂಬಂಧವಿದೆ. ಮೈಸೂರು ಸಂಸ್ಥಾನದ ರಾಜಗುರು ಪರಕಾಲ ಸ್ವಾಮೀಜಿ ಆಹ್ವಾನದ ಮೇರೆಗೆ ಮಹಾಲಕ್ಷ್ಮೀ ದೇಗುಲದ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೇನೆ’ ಎಂದು ಸುರಪುರ ಸಂಸ್ಥಾನದ ಅರಸರಾದ ರಾಜಾ ಕೃಷ್ಣಪ್ಪನಾಯಕ ಹೇಳಿದರು.
ಮೈಸೂರಿನ ಕೆ.ಆರ್. ಪೇಟೆ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಭೂವರಹನಾಥ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬಗಳಾಗಿವೆ. ನಾಡಿನ ಶ್ರದ್ಧಾ ಕೇಂದ್ರಗಳೂ ಆಗಿವೆ. ಭಕ್ತರ ಅಭಿಷ್ಟಗಳನ್ನು ಈಡೇರಿಸುವ ಭೂವರಹನಾಥ ದೇವರು, ಕಲ್ಲಹಳ್ಳಿ ಕ್ಷೇತ್ರಕ್ಕೆ ಅಪಾರ ಶಕ್ತಿ ಇದೆ. ತಿರುಮಲ ತಿರುಪತಿ ಮಾದರಿಯಲ್ಲಿ ಕ್ಷೇತ್ರ ಅಭಿವೃದ್ಧಿಯಾಗುತ್ತಿದೆ’ ಎಂದು ಹೇಳಿದರು.
‘ದೇವಸ್ಥಾನಕ್ಕೆ ಹಿಂದೆ ಅಪಾರ ನೆರವು ನೀಡಿದ ಹೊಯ್ಸಳ ಚಕ್ರವರ್ತಿ 3ನೇ ವೀರಬಲ್ಲಾಳರಿಗೆ ನಮನ ಸಲ್ಲಿಸುವುದಕ್ಕಾಗಿ ದೇಗುಲವನ್ನು ಹೊಯ್ಸಳ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಪರಕಾಲಶ್ರೀಗಳು ನನ್ನಿಂದ ಭೂಮಿ ಪೂಜೆ ನೆರವೇರಿಸಿದ್ದು, ಪುಳಕಿತನನ್ನಾಗಿಸಿದೆ. ಇದು ನಮ್ಮ ಮತ್ತು ಮೈಸೂರು ಸಂಸ್ಥಾನದ ಬೆಸುಗೆ ಇನ್ನಷ್ಟು ಗಟ್ಟಿಗೊಳಿಸಿದೆ’ ಎಂದು ಹೇಳಿದರು.
ಪರಕಾಲಶ್ರೀಗಳು ಮಾತನಾಡಿ, ‘ಭವ್ಯವಾಗಿದ್ದ ಈ ಪುರಾತನ ದೇಗುಲ ಮೊಹಮ್ಮದೀಯರ ದಾಳಿಯಿಂದ ಶಿಥಿಲವಾಗಿತ್ತು. 186 ಅಡಿ ಎತ್ತರದ ಗೋಪುರ ನಿರ್ಮಿಸಲಾಗುತ್ತಿದೆ. ಸಂಪೂರ್ಣ ಗ್ರೈನೇಟ್ ಕಲ್ಲಿನಿಂದ ಕಟ್ಟಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಕಾಮಗಾರಿ ಮುಗಿಯುತ್ತದೆ’ ಎಂದು ಹೇಳಿದರು.
ದೇಗುಲದ ವ್ಯವಸ್ಥಾಪನ ಸಮಿತಿ ಟ್ರಸ್ಟಿ ಶ್ರೀನಿವಾಸನ್ ರಾಘವನ್, ಗಂಜಿಗೇರಿ ಗ್ರಾ.ಪಂ ಅಧ್ಯಕ್ಷ ಪರಮೇಶಗೌಡ, ಮಂಡ್ಯ ಜಿ.ಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ, ಕೋರಮಂಗಲ್ ಸಕ್ಕರೆ ಕಾರ್ಖಾನೆ ಅಧಿಕಾರಿ ಬಿ. ನಾಗೇಶ, ಪುರಸಭೆ ಮಾಜಿ ಸದಸ್ಯ ಕೆ.ನೀಲಕಂಠ, ಶಿವಕುಮಾರ ಮಸ್ಕಿ, ಜಾವೇದ ಹವಲ್ದಾರ್, ವಿಜಯರಾಘವನ್, ಮಠದ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.