ಯಾದಗಿರಿ: ಬಿಜೆಪಿಯ ಜಿಲ್ಲಾ ಮುಖಂಡರ ನಿಯೋಗವು ಶುಕ್ರವಾರ ಜಿಲ್ಲೆಯ ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಗ್ರಾಮಗಳ ಜಮೀನುಗಳಿಗೆ ತೆರಳಿ ಹಾನಿಯಾದ ಬೆಳೆಯನ್ನು ಪರಿಶೀಲಿಸಿದ್ದು, ಕಾಟಾಚಾರಕ್ಕೆ ಬೆಳೆಹಾನಿ ಸಮೀಕ್ಷೆ ಮಾಡಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿತು.
ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ‘ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೆಂದ್ರ ಅವರ ಸೂಚನೆ ಮೇರೆಗೆ ಪಕ್ಷದ ನಿಯೋಗ ಪ್ರವಾಹ ಹಾಗೂ ಸತತ ಮಳೆಯಿಂದ ಹಾನಿಯಾದ ಗ್ರಾಮಗಳಿಗೆ ಭೇಟಿ ನೀಡಿದೆ’ ಎಂದರು.
‘ನಾಯ್ಕಲ್ ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಸಂಪೂರ್ಣ ಹಾಳಾಗಿವೆ. ಗಡ್ಡೆಸೂಗುರ ಮತ್ತು ಹಾಲಗೇರ ಗ್ರಾಮದ ಹತ್ತಿ ಹೊಲಗಳು ಸಂಪೂರ್ಣ ನಾಶವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿನ ಹಾನಿಗೊಳಗಾದ ಸ್ಥಳಗಳಿಗೆ ನಿಯೋಗ ತೆರಳಿ ಸಮೀಕ್ಷೆ ನಡೆಸಿ, ಪ್ರತಿ ಊರಿನ ವಾಸ್ತವ ವರದಿಯನ್ನು ರಾಜ್ಯ ತಂಡಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.
ನಾಯ್ಕಲ್ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾನಿಯಾಗಿದೆ. ಮನೆಗಳಿಗೂ ಹಾನಿಯಾಗಿ, ದನ ಕರುಗಳು ನಾಪತ್ತೆಯಾಗಿವೆ. ಜಮೀನಿಗೆ ಹೋಗುವ ದಾರಿ, ಜಮೀನಿನ ಒಡ್ಡುಗಳು, ತಂತಿ ಬೇಲಿಗಳು, ಗಿಡ ಮರಗಳು ಸಹ ಪ್ರವಾಹಕ್ಕೆ ತುತ್ತಾಗಿವೆ’ ಎಂದರು.
‘ಸರ್ಕಾರವು ಸರಿಯಾಗಿ ಸಮೀಕ್ಷೆ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ಈ ಬಗ್ಗೆ ರಾಜ್ಯ ಸಮಿತಿಯ ಗಮನಕ್ಕೆ ತರಲಾಗುವುದು. ಅಧಿಕಾರಿಗಳು ವಾಸ್ತವದ ಸಮೀಕ್ಷೆ ಮಾಡದೆ ಅರೆ ಬರೆ ಸಮೀಕ್ಷೆ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಲಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ’ ಎಂದು ಹೇಳಿದರು.
ನಿಯೋಗದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದಾ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ವಡಗೇರಾ, ಜಿಎಸ್ಟಿ ಜಿಲ್ಲಾ ಸಂಚಾಲಕ ಲಕ್ಷ್ಮಿಪುತ್ರ ಮಾಲಿಪಾಟೀಲ, ಮುಖಂಡರಾದ ನಾಗರತ್ನ ಕುಪ್ಪಿ, ಮಹೇಶರೆಡ್ಡಿ ಮುದ್ನಾಳ, ದೇವಿಂದ್ರನಾಥ ನಾದ್, ವೆಂಕಟರೆಡ್ಡಿ ಅಬ್ಬೆತುಮಕೂರ, ವೆಂಕಟರೆಡ್ಡಿ ಗೋಸಾಮಿ, ಸಂತೋಷ ವಡವಡಿಗಿ, ಬಸವರಾಜ ಮೈತ್ರೆ, ಮಹಿಪಾಲರಡ್ಡಿ ಹಿರೆಬರಿ, ಮಹಮ್ಮದ್ ಗೌಸ್, ಜಗ್ಗುಗೌಡ ದದ್ದಲ್, ಮಲ್ಲು ಕಲಮ್ಮನಿ, ಸಂಗರೆಡ್ಡಿ ಗೋಡೆಹಾಳ, ಯಲ್ಲಪ್ಪ ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.