ADVERTISEMENT

ಯಾದಗಿರಿ ಜಿಲ್ಲೆಗೆ ಈ ಬಜೆಟ್‌ನಲ್ಲಿ ಸಿಗುತ್ತಾ ಬ್ರಿಜ್‌ ಕಂ ಬ್ಯಾರೇಜ್‌?

ಜಿಲ್ಲೆಯಲ್ಲಿ ಹರಿಯುತ್ತಿವೆ ಕೃಷ್ಣಾ, ಭೀಮಾ ನದಿಗಳು, ಪ್ರವಾಹದಿಂದ ಪೋಲಾಗುವ ನೀರು ತಡೆಗೆ ಸಹಕಾರಿ

ಬಿ.ಜಿ.ಪ್ರವೀಣಕುಮಾರ
Published 5 ಮಾರ್ಚ್ 2021, 16:48 IST
Last Updated 5 ಮಾರ್ಚ್ 2021, 16:48 IST
ಯಾದಗಿರಿ ನಗರ ಹೊರವಲಯದ ಭೀಮಾ ನದಿ ಪ್ರವಾಹದಿಂದ ಭತ್ತದ ಗದ್ದೆಗೆ ನೀರು ನುಗ್ಗಿರುವ ಸಂಗ್ರಹ ಚಿತ್ರ
ಯಾದಗಿರಿ ನಗರ ಹೊರವಲಯದ ಭೀಮಾ ನದಿ ಪ್ರವಾಹದಿಂದ ಭತ್ತದ ಗದ್ದೆಗೆ ನೀರು ನುಗ್ಗಿರುವ ಸಂಗ್ರಹ ಚಿತ್ರ   

ಯಾದಗಿರಿ: ಕಳೆದ ಬಾರಿಯ ರಾಜ್ಯ ಬಜೆಟ್‌ನಲ್ಲಿ ತೀವ್ರ ನಿರೀಕ್ಷೆ ಇಟ್ಟುಕೊಂಡಿದ್ದ ಕೃಷ್ಣಾ, ಭೀಮಾ ನದಿಗೆ ಅಡ್ಡಲಾಗಿ ಬ್ರಿಕ್‌ ಕಂ ಬ್ಯಾರೇಜ್‌ ಘೋಷಣೆ ಈ ಬಾರಿಯಾದರೂ ಕೈಗೂಡುತ್ತಾ ಎನ್ನುವುದು ಜಿಲ್ಲೆಯ ಜನರ ಪ್ರಶ್ನೆಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೃಷ್ಣಾ, ಭೀಮಾ ನದಿ ಪ್ರವಾಹದಿಂದ ಕೋಟ್ಯಂತರ ಕ್ಯುಸೆಕ್‌ ನೀರು ಆಂಧ್ರಪ್ರದೇಶದವರ ಪಾಲಾಗುತ್ತದೆ. ಜಿಲ್ಲೆಯಲ್ಲಿ ಸಾಕಷ್ಟು ಹಾನಿಯೂ ಉಂಟು ಮಾಡುತ್ತಿದೆ. ಈ ಕಾರಣಕ್ಕಾಗಿ ಬಾಂದಾರ ನಿರ್ಮಿಸಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ.

ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷಕ್ಕಿಂತ ಹೆಚ್ಚು ಕ್ಯುಸೆಕ್‌ ನೀರು ಹರಿಸಿದರೆ ಪ್ರವಾಹ ಉಂಟಾಗಿ ಸಾಕಷ್ಟು ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತದೆ. ಜೊತೆಗೆ ಜನಜೀವನಕ್ಕೂ ಕಷ್ಟವಾಗುತ್ತದೆ. ಅದೇ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡುವುದರಿಂದ ನೀರನ್ನು ಹಿಡಿದುಕೊಳ್ಳಲು ಸಹಾಯವಾಗುತ್ತದೆ. ಕೊನೆ ಭಾಗದ ರೈತರಿಗೂ ನೀರು ಸಿಗುತ್ತದೆ.

ADVERTISEMENT

ಕೃಷ್ಣಾ ನದಿಗೆ ಅಡ್ಡಲಾಗಿ ಚೆನ್ನೂರ (ಜೆ), ಭೀಮಾ ನದಿಗೆ ಠಾಣಗುಂದಿ ಬಳಿ ಬ್ರೀಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ ಒಲವು ತೋರಿಸಿದ್ದಾರೆ. ಅದರಂತೆ ಶಹಾಪುರ ತಾಲ್ಲೂಕಿನ ಕೊಳ್ಳೂರು (ಎಂ) ಗ್ರಾಮದಲ್ಲಿ ಬಾಂದಾರ ನಿರ್ಮಿಸುವಂತೆ ಗ್ರಾಮಸ್ಥರು ಆಗ ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರು. ಪ್ರವಾಹ ಬಂದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಅವರು ಭೇಟಿ ನೀಡಿ ಬಾಂದಾರ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ವರ್ಷ ಕಳೆದರೂ ಇನ್ನೂ ಯಾವುದೇ ಪ್ರಗತಿ ಸಾಧಿಸಿಲ್ಲ.

ಊರು ತೊರೆಯುವ ಗ್ರಾಮಸ್ಥರು: ‍ಪ್ರತಿ ವರ್ಷ ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಾಗ ನದಿ ಪಾತ್ರದ ಜನರು ಗ್ರಾಮ ತೊರೆಯುವುದು ಸಾಮಾನ್ಯವಾಗಿದೆ. ಪ್ರವಾಹದ ಹೆಚ್ಚುವರಿ ನೀರನ್ನು ಕೆರೆಗಳಿಗೆ ಹರಿಸುವ ಯೋಜನೆಯೂ ಕೈಗೂಡಿಲ್ಲ.

ಬಸವಸಾಗರ ಜಲಾಶಯದಿಂದವಡಗೇರಾ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ನೀರು ತಲುಪುದಿಲ್ಲ. ಹೀಗಾಗಿ ವಡಗೇರಾ ತಾಲ್ಲೂಕಿನಲ್ಲಿಯೇ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣ ಮಾಡಬೇಕು ಎನ್ನುವುದು ಆ ಭಾಗದ ರೈತರ ಒತ್ತಾಯವಾಗಿದೆ.

ಜಿಲ್ಲೆಗೆ ಬ್ರಿಜ್‌ ಕಂ ಬ್ಯಾರೇಜ್‌ ಬೇಕು. ಈಗಾಗಲೇ ರೈತರು ಸೇರಿ ಸಭೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸುತ್ತೇವೆ.
ಚಂದ್ರಕಲಾ ಚಿ.ಬಾಗೂರು, ವಡಗೇರಾ, ರೈತ ಮುಖಂಡರು

ಜಿಲ್ಲೆಗೆ ಮುಖ್ಯಮಂತ್ರಿ ಹಲವಾರು ಕೊಡುಗೆ ನೀಡುವ ನಿರೀಕ್ಷೆ ಇದೆ. ಈಗಾಗಲೇ ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದೇವೆ. ಯಾವುದು ಮಂಜೂರು ಆಗುತ್ತದೆ ಕಾದು ನೋಡಬೇಕಿದೆ
ಪ್ರಭು ಚವಾಣ್‌, ಜಿಲ್ಲಾ ಉಸ್ತುವಾರಿ ಸಚಿವ

ಕೃಷ್ಣಾ, ಭೀಮಾ ನದಿಗೆ ಅಡ್ಡಲಾಗಿ ಬ್ರಿಜ್‌ ಕಂ ಬ್ಯಾರೇಜ್‌ ನಿರ್ಮಾಣಕ್ಕೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ. ಜತೆಗೆ ಏತನೀರಾವರಿಗಾಗಿಯೂ ಮನವಿ ಸಲ್ಲಿಸಲಾಗಿದೆ
ವೆಂಕಟರೆಡ್ಡಿ ಮುದ್ನಾಳ, ಶಾಸಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.