ADVERTISEMENT

‘ಶ್ರೀಗಳ ರಾಜಕೀಯದಿಂದ ತಪ್ಪು ಸಂದೇಶ’-ನಾಗನಗೌಡ ಕಂದಕೂರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 5:16 IST
Last Updated 23 ಜುಲೈ 2021, 5:16 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಗುರುಮಠಕಲ್: ನಾಡಿನ ಮಠಗಳು ಸಾಮಾಜಿಕ, ಅಧ್ಯಾತ್ಮ, ಶೈಕ್ಷಣಿಕ ಹಾಗೂ ದಾಸೋಹಗಳಿಂದ ಹೆಸರುವಾಸಿ. ಆದರೆ, ಸ್ವಾಮೀಜಿಗಳು ಹೀಗೆ ರಾಜಕೀಯದಲ್ಲಿ ತೊಡಗುವುದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಶಾಸಕ ನಾಗನಗೌಡ ಕಂದಕೂರ ಅಭಿಪ್ರಾಯಪಟ್ಟರು.

ಮುಖ್ಯಮಂತ್ರಿ ಬದಲಾವಣೆ ವಿಷಯದಲ್ಲಿ ಹಲವು ಸ್ವಾಮೀಜಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಹಿಸಿದ ಕುರಿತು ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ಮಠಗಳು ಸಮಾಜದಲ್ಲಿ ತ್ರಿವಿಧ ದಾಸೋಹದ ಮೂಲಕ ಜನರಿಗೆ ಮಾರ್ಗದರ್ಶನ ನೀಡಿದರೆ ಸಮಾಜಕ್ಕೆ ಒಳಿತು. ಯಾವುದೋ ರಾಜಕೀಯ ನಾಯಕರ ಪರ ನಿಲ್ಲುವುದು ಸರಿಯಲ್ಲ ಎಂದರು.

ಮುಖ್ಯಮಂತ್ರಿಗಳನ್ನು ಬದಲಾಯಿಸುವ ಕುರಿತು ನಾನು ಯಾವ ಪ್ರತಿಕ್ರಿಯೆ ನೀಡುವುದಿಲ್ಲ, ಅದು ಅವರ ಪಕ್ಷದ ವರಿಷ್ಠರು ಹಾಗೂ ಶಾಸಕರಿಗೆ ಸಂಬಂಧಿಸಿದ್ದು, ಯಾರೇ ಮುಖ್ಯಮಂತ್ರಿಯಾದರೂ ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯವೇ ಹೊರತು ಬೇರೆ ವಿಷಯಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.

ADVERTISEMENT

ಹಿಂದಿನ ಸರ್ಕಾರ ಗುರುಮಠಕಲ್ ಕ್ಷೇತ್ರಕ್ಕೆ ನೀಡಿದ ಅನುದಾನದಲ್ಲಿ ₹300 ಕೋಟಿ ಹಿಂಪಡೆದ ಸರ್ಕಾರವಿದು, ಈ ಕುರಿತು ಹಲವು ಬಾರಿ ನಾನು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬದಲಾದಲ್ಲಿ, ಅವರಾದರೂ ಕ್ಷೇತ್ರಕ್ಕೆ ಅನುದಾನ ನೀಡಲಿ ಎನ್ನುವ ಬೇಡಿಕೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.