ಕೆಂಭಾವಿ: ಅವ್ಯವಸ್ಥೆಯ ಆಗರವಾದ ಪಟ್ಟಣದ ಬಸ್ ನಿಲ್ದಾಣಕ್ಕೆ ಭಾನುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ ಭೇಟಿ ನೀಡಿ ಪರಿಶೀಲಿಸಿದರು.
ಬಸ್ ನಿಲ್ದಾಣ ಸುತ್ತಲೂ ಪರಿಶೀಲಿಸಿ ನಂತರ ಮಾತನಾಡಿದ ಅವರು, ‘ಮಳೆ ಬಂದರೆ ಬಸ್ ನಿಲ್ದಾಣದಲ್ಲಿ ನೀರು ತುಂಬುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ಶೀಘ್ರವೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಶಕ್ತಿ ಯೋಜನೆ ಈ ಬಸ್ ನಿಲ್ದಾಣ ಅಭಿವೃದ್ಧಿಯತ್ತ ಸಾಗುತ್ತಿದ್ದು, ಇಲ್ಲಿರುವ ಎಲ್ಲ ಸಮಸ್ಯೆಗಳಿಗೆ ಆದಷ್ಟು ಬೇಗ ಅಂತ್ಯ ಹಾಡಲಾಗುವುದು’ ಎಂದು ಹೇಳಿದರು.
‘ಕುಡಿಯುವ ನೀರು, ಶೌಚಾಲಯ, ಬಸ್ ನಿಲ್ದಾಣ ಶುಚಿತ್ವ, ಸಿಸಿ ರಸ್ತೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಮತ್ತು ಹೆಚ್ಚಿನ ಬಸ್ಗಳನ್ನು ಓಡಿಸಲಾಗುವುದು’ ಎಂದು ಭರವಸೆ ನೀಡಿದರು.
ಸಂಚಾರ ನಿಯಂತ್ರಕ ಮಾನಪ್ಪ ಉಪಸ್ಥಿತರಿದ್ದರು.
ಆಗ್ರಹ: ‘ಕೆಂಭಾವಿ ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಬಸ್ಗಳು ಮಾತ್ರ ಬೆರಣಿಕೆಯಷ್ಟು ಇಲ್ಲಿಂದ ಕಾರ್ಯಾಚರಣೆ ಮಾಡುತ್ತಿವೆ. ಈ ಬಸ್ ನಿಲ್ದಾಣದಿಂದ ನಿಗಮಕ್ಕೆ ಸಾಕಷ್ಟು ಆದಾಯ ಬರುತ್ತಿದ್ದರೂ ಯಾವುದೇ ನೂತನ ಬಸ್ಗಳು ಪ್ರಾರಂಭಿಸಿಲ್ಲ. ಮೊದಲು ಇದ್ದ ಕೆಲವೊಂದು ಮಾರ್ಗದ ಬಸ್ಗಳನ್ನು ರದ್ದು ಮಾಡುವ ಮೂಲಕ ಈ ಭಾಗದ ಪ್ರಯಾಣಿಕರಿಗೆ ಸಾರಿಗೆ ನಿಗಮ ಅನ್ಯಾಯ ಮಾಡಿದೆ. ಇಲ್ಲಿಂದ ಹೆಚ್ಚಿನ ಬಸ್ಗಳನ್ನು ಓಡಿಸಿ ಬಸ್ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಸಂಜೀವರಾವ ಕುಲಕರ್ಣಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.