ADVERTISEMENT

ಬಿಜೆಪಿಗೆ 150 ಸೀಟು: ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಮೇ 2022, 4:52 IST
Last Updated 1 ಮೇ 2022, 4:52 IST
ಚಲುವಾದಿ ನಾರಾಯಣಸ್ವಾಮಿ
ಚಲುವಾದಿ ನಾರಾಯಣಸ್ವಾಮಿ   

ಯಾದಗಿರಿ: ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು, 2023ರಲ್ಲಿ 150 ಸೀಟು ಪಡೆಯುವ ಮೂಲಕ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಎಸ್‌ಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಚಲುವಾದಿ ನಾರಾಯಣಸ್ವಾಮಿ ಹೇಳಿದರು.

ಜಗತ್ತಿನಲ್ಲಿಯೇ ಅತಿ ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ಸಂಘಟನಾತ್ಮಕವಾಗಿ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಪಕ್ಷವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ನಮಗೆ ಪೈಪೋಟಿಯೂ ಯಾವ ಪಕ್ಷವೂ ಕೊಡುವುದಿಲ್ಲ. ಕಾರ್ಯಕರ್ತರ ಶಕ್ತಿಯಿಂದಲೇ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿದರು.

ADVERTISEMENT

ವೋಟ್‌ ಬ್ಯಾಂಕ್‌ ಮಾಡಿಕೊಂಡ ಕಾಂಗ್ರೆಸ್‌: ಸ್ವಾತಂತ್ರ್ಯ ನಂತರ 60 ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್‌ ಪಕ್ಷ ದಲಿತರನ್ನು ಕೇವಲ ವೋಟ್‌ ಬ್ಯಾಂಕ್‌ ಆಗಿ ಮಾಡಿಕೊಂಡಿದೆ. ಆದರೆ, ಬಿಜೆಪಿ ಮಾತ್ರ ದಲಿತರಿಗೆ ಅನೇಕ ಸೌಲಭ್ಯ ಒದಗಿಸಿದೆ. ಈ ಬಜೆಟ್‌ ನಲ್ಲಿ 75 ಯೂನಿಟ್ ತನಕ ಉಚಿತ ವಿದ್ಯುತ್‌ ಘೋಷಿಸಲಾಗಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರು ತಿರುಗಾಡಿದ ಪಂಚಕ್ಷೇತ್ರಗಳನ್ನು ದೇಶದಲ್ಲಿ ಅಭಿವೃದ್ಧಿಪಡಿಸಿದರೆ, ರಾಜ್ಯದಲ್ಲಿ 7 ಸ್ಥಳಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಸದಾಶಿವ ಅಯೋಗ ಜಾರಿಗೆ ಶ್ರಮ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಮೀಸಲಾತಿ ಒದಗಿಸಲು ರಚಿಸಿರುವ ನ್ಯಾಯಾಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಬಿಜೆಪಿ ಜಾರಿಗೆ ಶ್ರಮಿಸಲಿದೆ ಎಂದು ಎಸ್‌ಸಿ ಮೋರ್ಚಾದ ರಾಜ್ಯ ಅಧ್ಯಕ್ಷ ಚಲುವಾದಿ ನಾರಾಯಣಸ್ವಾಮಿ ಹೇಳಿದರು.

ದಲಿತ ಸಿಎಂ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಮೊದಲೇ ಮುಖ್ಯಮಂತ್ರಿಯನ್ನು ಘೋಷಣೆ ಮಾಡುವುದಿಲ್ಲ. ದಲಿತರನ್ನು ಮುಖ್ಯಮಂತ್ರಿ ಮಾಡುವುದರಲ್ಲಿ ಬಿಜೆಪಿಗೆ ನಷ್ಟವೇನು ಇಲ್ಲ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದರು.

ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬರಾಯ ಅಷ್ಟಗಿ,ಎಸ್ ಸಿ ಮೊರ್ಚಾ ಜಿಲ್ಲಾಧಕ್ಷ ಭೀಮಶಂಕರ ಬಿಲ್ಲವ,ಎಸ್‌ ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಪರುಶುರಾಮ ಕುರಕುಂದಿ,ಜಿಲ್ಲಾ ವಕ್ತಾರ ಹೆಚ್ ಸಿ ಪಾಟೀಲ,ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ,ನಗರಸಭೆ ಅಧ್ಯಕ್ಷ ಸುರೇಶ್ ಅಂಬೀಗೆರ,ಮಾಜಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್,ಖಂಡಪ್ಪ ದಾಸನ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.