ADVERTISEMENT

‘ಕಂದಾಯ ಗ್ರಾಮಗಳ ರಚನೆ ಪೂರ್ಣಗೊಳಿಸಿ’: ಜಿಲ್ಲಾಧಿಕಾರಿ ರಾಗಪ್ರಿಯಾ

ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಾಗಪ್ರಿಯಾ ಆರ್. ಸೂಚನೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 4:45 IST
Last Updated 9 ನವೆಂಬರ್ 2021, 4:45 IST
ರಾಗಪ್ರಿಯಾ
ರಾಗಪ್ರಿಯಾ   

ಯಾದಗಿರಿ: ಪಹಣಿ, ಕಾಲಂ 3 ಮತ್ತು 9 ರ ಪಹಣಿಯಲ್ಲಿನ ವ್ಯತ್ಯಾಸ, ಮೋಜನಿ ಮತ್ತು ಆರ್‌ಟಿಸಿ ತಿದ್ದುಪಡಿ, ಎಜೆಎಸ್ಕೆ ನಾಡಕಚೇರಿ ಕಟ್ಟಡ ಪ್ರಗತಿ, ಮಾಸಾಶನ ಪ್ರಗತಿಯ ಮಾಹಿತಿ ಪಡೆದು ಕಂದಾಯ ಇಲಾಖೆ ಪ್ರಗತಿ ಕುಂಠಿತವಾಗದಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಸೂಚಿಸಿದರು.

ಸೋಮವಾರ ಕಚೇರಿಯ ಸಭಾಂಗಣದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಂದಾಯ ಗ್ರಾಮ, ಮೋಜನಿ, ಆರ್‌ಟಿಸಿ, ಎಜೆಎಸ್ಕೆ ತಂತ್ರಾಂಶದಡಿಯಲ್ಲಿ ಸ್ವೀಕೃತಿಯಾದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಸೂಚಿಸಿದರು.

ADVERTISEMENT

ಇಲಾಖೆಯಲ್ಲಿ ಹಾಗೂ ನೋಂದಾಯಿತ ಸರ್ವೇಯರ್‌ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿ ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ವೇಯರ್‌ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ತಿಳಿಸಿದರು.

ಜಿಲ್ಲಾಧಿಕಾರಿ ನಡೆ- ಹಳ್ಳಿ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಯಾದಗಿರಿ ತಾಲ್ಲೂಕಿನ ನೀಲಹಳ್ಳಿ ಗ್ರಾಮದಲ್ಲಿ 124 ಅರ್ಜಿ, ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದಲ್ಲಿ 67 ಅರ್ಜಿ, ಸುರಪುರ ತಾಲ್ಲೂಕಿನ ದೇವಿಕೇರಿ ಗ್ರಾಮದಲ್ಲಿ 39, ವಡಗೇರಾ ತಾಲ್ಲೂಕಿನ ಬೊಮ್ಮನಹಳ್ಳಿ 58, ಹುಣಸಗಿ ತಾಲ್ಲೂಕಿನ ವಜ್ಜಲ್ ಗ್ರಾಮದಲ್ಲಿ 42, ಗುರುಮಠಕಲ್ ತಾಲ್ಲೂಕಿನ ಮಾಧ್ವಾರ ಗ್ರಾಮದಲ್ಲಿ 49 ಜಿಲ್ಲೆಯಲ್ಲಿ ಒಟ್ಟು 379 ಅರ್ಜಿಗಳು ಸ್ವೀಕೃತಿಯಾಗಿವೆ. ಅದರಲ್ಲಿ 221 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇನ್ನು ಬಾಕಿ ಉಳಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಜಿಲ್ಲಾಧಿಕಾರಿ ಸೂಚಿಸಿದರು.

ಯಾದಗಿರಿ ತಾಲ್ಲೂಕಿನ ಬಸವನಗರ, ಶಹಾಪುರ ತಾಲ್ಲೂಕಿನ ಹೊಸೂರು ಹಾಗೂ ಸುರಪುರ ತಾಲ್ಲೂಕಿನ ಭಾಗ್ಯನಗರ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಅಂತಿಮ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಂತಿಮ ಅಧಿಸೂಚನೆ ಹೊರಡಿಸುವುದು ಬಾಕಿ ಇರುತ್ತದೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾಗುವ ಕಂದಾಯ ಗ್ರಾಮಗಳ ಮಾಹಿತಿಯಲ್ಲಿ ಸರ್ಕಾರಿ ಜಮೀನಿನಲ್ಲಿ 3 ಗ್ರಾಮ, ಖಾಸಗಿ ಜಮೀನಿನಲ್ಲಿ 69 ಗ್ರಾಮ, ಅರಣ್ಯ ಜಮೀನಿನಲ್ಲಿ 4 ಗ್ರಾಮ, ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ 17 ಸೇರಿ ಒಟ್ಟು 93 ಗ್ರಾಮಗಳಿವೆ. ಇವುಗಳಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾದ ಗ್ರಾಮ 3, ಪರಿಷ್ಕೃತ 2- ಇ ಅಧಿಸೂಚನೆ ಹೊರಡಿಸಲಾದ ಗ್ರಾಮ 40 ಮತ್ತು 2-ಇ ಅಧಿಸೂಚನೆ ಹೊರಡಿಸಲು 50 ಗ್ರಾಮಗಳು ಬಾಕಿ ಇರುತ್ತವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕಂದಾಯ ಗ್ರಾಮಗಳ ರಚನಾ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ, ಗುರುಮಠಕಲ್ ತಹಶೀಲ್ದಾರ್‌ ಶರಣಬಸವ, ಶಹಾಪುರ ತಹಶೀಲ್ದಾರ ಮಧುರಾಜ್, ಸುರಪುರ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

***

ಅಂತ್ಯಸಂಸ್ಕಾರ ಹಾಗೂ ಪಿಂಚಣಿ ಸೌಲಭ್ಯ ಯೋಜನೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಫಲಾನುಭವಿಗಳಿಗೆ ವಿಳಂಬವಿಲ್ಲದೇ ಪರಿಹಾರ ಮಂಜೂರು ಮಾಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ರಾಗಪ್ರಿಯಾ ಆರ್., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.