ಯಾದಗಿರಿ: ಸುರಪುರ ತಾಲ್ಲೂಕಿನ ಕಕ್ಕೇರಾ ಪಟ್ಟಣದ ಪತ್ರಕರ್ತ ವೆಂಕಟೇಶ ದೊರೆ ನಿಧನಕ್ಕೆ ಜಿಲ್ಲಾ ಪತ್ರಕರ್ತರಿಂದ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಪತ್ರಕರ್ತ ಇಂಧೂದರ ಸಿನ್ನೂರ, ‘ಜನರಲ್ಲಿ ಜಾಗೃತಿ ಮೂಡಿಸಬೇಕಾದ ಪತ್ರಕರ್ತರು ಕೋವಿಡ್ಗೆ ಬಲಿಯಾಗುತ್ತಿರುವುದು ದುರಂತದ ಸಂಗತಿ. ಪತ್ರಕರ್ತರು ತಮ್ಮ ವೃತ್ತಿ ನಿಭಾಯಿಸುವ ಸಂದರ್ಭದಲ್ಲಿ ಕಾಳಜಿ ಮತ್ತು ಜಾಗೃತಿ ವಹಿಸಬೇಕು’ ಎಂದು ಸಲಹೆ ನೀಡಿದರು.
ಪತ್ರಕರ್ತ ಡಿ.ಸಿ.ಪಾಟೀಲ ಮಾತನಾಡಿ, ‘ವೆಂಕಟೇಶ ದೊರೆ ಅವರು ಸ್ನೇಹ ಜೀವಿಯಾಗಿದ್ದರು. ಎಲ್ಲರ ಜೊತೆಗೆ ಮುಕ್ತ ಮನಸ್ಸಿನಿಂದ ಬೆರೆಯುತ್ತಿದ್ದರು’ ಎಂದು ಹೇಳಿದರು.
ಪತ್ರಕರ್ತ ಲಕ್ಷ್ಮೀಕಾಂತ ಕುಲಕರ್ಣಿ ಮಾತನಾಡಿ, ‘ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗುವ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕಾಲ ಬಂದಿದ್ದು, ಪತ್ರಕರ್ತರು ಒಗ್ಗಟ್ಟಾಗಿ ನೊಂದವರ ಕುಟುಂಬಕ್ಕೆ ಸಾಥ್ ನೀಡೋಣ’ ಎಂದರು.
ಪತ್ರಕರ್ತರಾದ ವೈಜನಾಥ ಹಿರೇಮಠ, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಪವನ ಕುಲಕರ್ಣಿ, ಮಹೇಶ ಕಲಾಲ, ನಾಗಪ್ಪ ಮಾಲಿಪಾಟೀಲ, ಗಿರೀಶ ಕಮ್ಮಾರ, ರಾಜೇಶ ಪಾಟೀಲ, ಸಾಗರ ದೇಸಾಯಿ, ರಾಜು ಕುಂಬಾರ, ನಾಗಪ್ಪ ನಾಯ್ಕಲ್, ಸಾಜೀದ್ ಹಯ್ಯಾತ್, ರಾಜುಕುಮಾರ ನಳ್ಳಿಕರ, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ಪರಶುರಾಮ, ರಂಗಯ್ಯ, ಮುಸ್ತಾಜೀರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.