ADVERTISEMENT

ಯಾದಗಿರಿ: ನಗರದಲ್ಲಿ 28ಕ್ಕೆ ಪ್ರಜಾಧ್ವನಿ ಯಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:59 IST
Last Updated 26 ಜನವರಿ 2023, 5:59 IST
ಬಸರೆಡ್ಡಿ
ಬಸರೆಡ್ಡಿ   

ಯಾದಗಿರಿ: ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶವು ಜನವರಿ 28ರಂದು ಬೆಳಿಗ್ಗೆ 10 ಗಂಟೆಗೆ ನಗರದ ವನಕೇರಿ ಲೇಔಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ತಿಳಿಸಿದರು.

28 ರಂದು ಪ್ರಜಾಧ್ವನಿ ಯಾತ್ರೆ ಯಾದಗಿರಿಗೆ ಆಗಮಿಸಲಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ರಣದೀಪ ಸುರ್ಜೆವಾಲ, ಮುಖಂಡರಾದ ಎಂ.ಬಿ.ಪಾಟೀಲ, ಬಿ.ಕೆ.ಹರಿಪ್ರಸಾದ್‌, ಈಶ್ವರ ಖಂಡ್ರೆ,‌ ಸತೀಶ ಜಾರಕಿಹೊಳಿ, ಶರಣಪ್ರಕಾಶ ಪಾಟೀಲ, ಬಿ.ವಿ.ನಾಯಕ, ಪ್ರಿಯಾಂಕ್ ಖರ್ಗೆ ಸೇರಿದಂತೆ ಜಿಲ್ಲೆಯ ಪ್ರಮುಖ‌ ನಾಯಕರು ಈ ಕಾರ್ಯಕ್ರಮದಲ್ಲಿ‌ ಭಾಗಿಯಾಗಲಿದ್ದಾರೆ ಎಂದು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಶೇ 40 ರಷ್ಟು ಕಮಿಷನ್‌ ಪಡೆದು ಗುತ್ತಿಗೆ ಕಾಮಗಾರಿ ಮಾಡುತ್ತಿದೆ. ಇದರಿಂದ ರಾಜ್ಯದ ಮರ್ಯಾದೆ ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ. ಈ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಅಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೆಲಿಕ್ಯಾಪ್ಟರ್ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ಬರಲಿದ್ದು, ನಂತರ ಅವರನ್ನು ಬೈಕ್‌ ರ್‍ಯಾಲಿ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಪ್ರಜಾಧ್ವನಿ ಯಾತ್ರೆ ಎಲ್ಲ‌ ಜಿಲ್ಲಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಬೆಳಗಾವಿಯಿಂದ ಪ್ರಾರಂಭವಾಗಿದೆ. 28 ಕ್ಕೆ ಯಾದಗಿರಿಯಲ್ಲಿ ಸಮಾರೋಪ ನಡೆಯಲಿದೆ ಎಂದರು.

ವಾಮಮಾರ್ಗದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದ ವಿಚಾರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ರಸಗೊಬ್ಬರ ಬೆಲೆ ಏರಿಕೆ, ರೈತವಿರೋಧಿ ಧೋರಣೆ, ಖರೀದಿ ಕೇಂದ್ರ ತೆರೆಯದ ಕುರಿತು, ಜನವಿರೋಧಿ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸುವುದರ ಜೊತೆಗೆ‌ ಕಾರ್ಯಕರ್ತರಿಗೆ ತಿಳಿಸುವ ಉದ್ದೇಶವಿದೆ ಎಂದು ಹೇಳಿದರು.

ಈ ವೇಳೆ ಮುಖಂಡರಾದ ಮರಿಗೌಡ ಹುಲಕಲ್, ಎ.ಸಿ.ಕಾಡ್ಲೂರು, ಡಾ‌.ಭೀಮಣ್ಣ ಮೇಟಿ, ಸಿದ್ದಲಿಂಗರೆಡ್ಡಿ ಉಳ್ಳೆಸುಗೂರು, ಶರಣಪ್ಪ ಮಾನೇಗಾರ, ವಿಶ್ವನಾಥ ನೀಲಳ್ಳಿ, ಡಾ‌. ಶರಣಬಸವಪ್ಪ ಕಾಮರೆಡ್ಡಿ, ಸುದರ್ಶನ ನಾಯಕ, ಮರೆಪ್ಪ ಬಿಳ್ಹಾರ, ಸಾಯಿಬಣ್ಣ, ಚಿದಾನಂದಪ್ಪ‌ ಕಾಳಬೆಳಗುಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.