ADVERTISEMENT

ಸುರಪುರ | ಕಲುಷಿತ ನೀರು–ಆಹಾರ ಸೇವನೆ: ಚಿಕ್ಕನಳ್ಳಿಯಲ್ಲಿ 37 ಜನ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 10:47 IST
Last Updated 28 ಆಗಸ್ಟ್ 2023, 10:47 IST
ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ವಾಂತಿಭೇದಿ ಬಳಲುತ್ತಿರುವವರಿಗೆ ಶಾಲೆಯಲ್ಲಿ ಚಿಕಿತ್ಸೆ ನೀಡಲಾಯಿತು. ಶಾಸಕ ರಾಜಾ ವೆಂಕಟಪ್ಪನಾಯಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು
ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ವಾಂತಿಭೇದಿ ಬಳಲುತ್ತಿರುವವರಿಗೆ ಶಾಲೆಯಲ್ಲಿ ಚಿಕಿತ್ಸೆ ನೀಡಲಾಯಿತು. ಶಾಸಕ ರಾಜಾ ವೆಂಕಟಪ್ಪನಾಯಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು   

ಸುರಪುರ (ಯಾದಗಿರಿ ಜಿಲ್ಲೆ): ಕಲುಷಿತ ನೀರು, ಕಲುಷಿತ ಆಹಾರ ಸೇವನೆಯಿಂದ ಪ್ರತ್ಯೇಕ ಎರಡು ಘಟನೆಗಳಲ್ಲಿ 37 ಜನ ಅಸ್ವಸ್ಥರಾಗಿದ್ದಾರೆ.‌

ಕಲುಷಿತ ನೀರು ಸೇವನೆಯಿಂದ 24 ಜನರು ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ವಾಂತಿಭೇದಿಯಿಂದ ಬಳಲುತ್ತಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಅದರಲ್ಲಿ 22 ಶಾಲಾ ಮಕ್ಕಳು ಇದ್ದಾರೆ.

ಕಳೆದ ವಾರದಿಂದ ಶುದ್ಧ ಕುಡಿಯುವ ನೀರು ಘಟಕ ಬಂದ್ ಆಗಿದೆ. ಹೀಗಾಗಿ ಕೊಳವೆಬಾವಿ ನೀರು ಸೇವಿಸಿದ ಜನರಲ್ಲಿ ವಾಂತಿ ಬೇಧಿಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥ: ಭತ್ತ ನಾಟಿ ಮಾಡಲು ಬಂದಿರುವ ಬಂಗಾಲಿ ಕೃಷಿ ಕಾರ್ಮಿಕರು ಕಲುಷಿತ ಆಹಾರ ಸೇವಿಸಿ ಅಸ್ವಸ್ಥಗೊಂಡ ಘಟನೆಯೂ ಚಿಕ್ಕನಳ್ಳಿಯಲ್ಲಿ ಭಾನುವಾರ ಜರುಗಿದೆ.

ವಾಂತಿಭೇದಿಗೆ ಒಳಗಾದ 13 ಕಾರ್ಮಿಕರನ್ನು ಸುರಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಇಬ್ಬರನ್ನು ರಾಯಚೂರು ಮತ್ತು ಒಬ್ಬ ರೋಗಿಯನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.

‘ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಘಟನೆಗೆ ಕಲುಷಿತ ಆಹಾರ ಸೇವನೆ ಕಾರಣ ಎಂದು ಪರೀಕ್ಷೆಯಿಂದ ತಿಳಿದು ಬಂದಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ತಿಳಿಸಿದರು.

ಗ್ರಾಮಕ್ಕೆ ಶಾಸಕ ರಾಜಾ ವೆಂಕಟಪ್ಪನಾಯಕ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. 'ಕುಡಿಯುವ ನೀರಿನ ಘಟಕ ಶೀಘ್ರ ಆರಂಭಿಸಬೇಕು. ಸ್ವಚ್ಛತೆ ಕಾಪಾಡಬೇಕು. ಎಲ್ಲ ಕೊಳವೆಬಾವಿ ನೀರನ್ನು ಪರೀಕ್ಷೆಗೆ ಲ್ಯಾಬ್‌ಗೆ ಕಳಿಸಿ' ಎಂದು ಸೂಚಿಸಿದರು.

ಬಿಸಿಸಿಐ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮುಖಂಡ ಮಲ್ಲಣ್ಣ ಸಾಹುಕಾರ ಮುಧೋಳ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಪಿಡಿಒ ಚಂದಪ್ಪನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.