ಸುರಪುರ: ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಿ, ರೈತರಿಗೆ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆ ಮುಖಂಡರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
‘ಅತಿವೃಷ್ಟಿಯಿಂದ ಹತ್ತಿ ಬೆಳೆ ಬಹುತೇಕ ಹಾಳಾಗಿದೆ. ಅಲ್ಪ, ಸ್ವಲ್ಪ ಉಳಿದಿದೆ. ಆದರೆ ಖಾಸಗಿ ಖರೀದಿದಾರರು ತಮ್ಮ ಮನಸ್ಸಿಗೆ ಬಂದಂತೆ ದರ ನಿಗದಿ ಮಾಡಿ ರೈತರಿಂದ ಹತ್ತಿ ಖರೀದಿ ಮಾಡುತ್ತಿದ್ದಾರೆ’ ಎಂದು ದೂರಿದರು.
‘ಖಾಸಗಿ ಖರೀದಿದಾರರಿಗೆ ಹತ್ತಿ ಮಾರಾಟ ಮಾಡುವುದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ. ಬೆಳೆಗೆ ಬೀಜ, ದುಬಾರಿ ರಸಗೊಬ್ಬರ, ಕೀಟನಾಶಕ, ಕೂಲಿಯಾಳು ಸೇರಿ ಖರ್ಚು ಮಾಡಿದ ಹಣ ಕೂಡ ಕೈಗೆ ಬರುವುದಿಲ್ಲ. ಖರೀದಿ ಕೇಂದ್ರ ಮುಖಾಂತರ ಖರೀದಿ ಮಾಡಿ ಬಡ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
‘ಕೂಡಲೇ ಪರಿಹಾರ ಹಣ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ನಾರಾಯಣಪುರ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಡ್ಯಾಂನಲ್ಲಿ ರೈತರು ಬೇಸಿಗೆ ಬೆಳೆಯನ್ನು ಬೆಳೆಯುವಷ್ಟು ನೀರಿದೆ. ಕಾರಣ ಆದಷ್ಟು ಬೇಗ ಸಲಹಾ ಸಮಿತಿ ಸಭೆ ಕರೆದು ಹಿಂಗಾರು ಬೆಳೆಗೆ ವಾರಬಂದಿ ಮಾಡದೆ ನಿರಂತರವಾಗಿ ಕಾಲುವೆಗೆ ನೀರು ಹರಿಸಿ ಕಾಲುವೆಯ ಕೊನೆಯ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ, ಹುಣಸಗಿ ತಾಲ್ಲೂಕು ಸಮಿತಿ ಅಧ್ಯಕ್ಷ ಹನುಮಗೌಡ ನಾರಾಯಣಪುರ, ವೆಂಕಟೇಶಗೌಡ ಕುಪಗಲ್, ಮಲ್ಲಣ್ಣ ಹಾಲಬಾವಿ, ಸಾಹೇಬಗೌಡ ಮದಲಿಂಗನಾಳ, ಮುಖಂಡರಾದ ಗದ್ದೆಪ್ಪ ನಾಗಬೇವಿನಾಳ, ದೇವಿಂದ್ರ ತಿಪ್ಪನಟಗಿ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ತಿಪ್ಪಣ್ಣ ಜಂಪಾ, ನಾಗಪ್ಪ ಕುಪಗಲ್, ಭೀಮಣ್ಣ, ಭೀಮಣ್ಣ ಸೇರಿ ಅನೇಕ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.