ಶಹಾಪುರ: ‘ತಾಲ್ಲೂಕಿನ ಹಬ್ಬಳ್ಳಿ ಹಾಗೂ ಇಬ್ರಾಹಿಂಪುರ ಗ್ರಾಮದಲ್ಲಿ ರೈತರು ಬೆಳೆದ ಹತ್ತಿಯನ್ನು ವಿಶೇಷ ಪ್ರಕರಣವೆಂದು ಗಮನಿಸಿ ಭಾರತೀಯ ಹತ್ತಿ ನಿಗಮದ ವತಿಯಿಂದ ₹2.50 ಕೋಟಿ ಮೌಲ್ಯದ ಹತ್ತಿಯನ್ನು ಖರೀದಿಸಿದ್ದೇವೆ’ ಎಂದು ಕೃಷಿ ಮಂಡಳಿಯ ಸಹಾಯಕ ನಿರ್ದೇಶಕ ಭೀಮರಾಯ ತಿಳಿಸಿದರು.
ನಗರದ ಎಂಪಿಎಂಸಿ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಮುಖಂಡರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯ ರೈತ ಸಂಘದ ಮುಖಂಡರು ಆಗಮಿಸಿ ರೈತರ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದರು. ಅಲ್ಲದೆ ನೇರವಾಗಿ ನಾವೆಲ್ಲರೂ ಕೂಡಿ ಗ್ರಾಮಕ್ಕೆ ತೆರಳಿ ಅಲ್ಲಿ ಸಂಗ್ರಹಿಸಿ ಇಟ್ಟ ಹತ್ತಿಯನ್ನು ಗಮನಿಸಿದೆವು. ಮಳೆಗೆ ಹಾನಿಯಾದರೆ ರೈತರು ಸಂಕಷ್ಟ ಎದುರಿಸುತ್ತಾರೆ ಎಂಬುದು ಮನವರಿಕೆಯಾದ ಬಳಿಕ ಹಬ್ಬಳ್ಳಿ ಹಾಗೂ ಇಬ್ರಾಹಿಂಪೂರ ಗ್ರಾಮದ 43 ರೈತರಿಂದ 3,459 ಕ್ವಿಂಟಲ್ ಹತ್ತಿಯನ್ನು ಖರೀದಿಸುವುದರ ಜೊತೆಗೆ ₹2.50 ಕೋಟಿ ಹಣ ಪಾವತಿಸಲು ಸೂಚಿಸಲಾಯಿತು’ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಕಾರ್ಯದರ್ಶಿ ಮಹೇಶ ಸುಬೇದಾರ ಮಾತನಾಡಿ, ತಾಲ್ಲೂಕಿನ ಅಧಿಕಾರಿಗಳು ರೈತರಿಗಾಗಿ ವಿಶೇಷ ಕಾಳಜಿ ವಹಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರ್ ಜಗನಾಥರಡ್ಡಿ, ಎಪಿಎಂಸಿ ಕಾರ್ಯದರ್ಶಿ ಸಂತೋಷ ಮುದ್ದಾ, ಸಹಾಯಕ ಕೃಷಿ ನಿರ್ದೇಶಕ ಗೌತಮ ವಾಗ್ಮೋರೆ ಅವರಿಗೆ ಹೂ ಮಳೆ ಸುರಿಸಿ ಅಭಿನಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.