ಯಾದಗಿರಿ: ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಪ್ರತಿಷ್ಠಾಪನೆ ಮಾಡಿದ್ದ ಹಿಂದು ಗಣಪತಿ ವಿಸರ್ಜನೆ ವೇಳೆ ಸಾವಿರಾರು ಜನರು ಸೇರಿ ಕೋವಿಡ್ ನಿಯಮ ಉಲ್ಲಂಘಿಸಿರುವುದು ಕಂಡುಬಂತು.
ಗಣೇಶ ವಿಸರ್ಜನೆ ಸಂಭ್ರಮದಲ್ಲಿ ಸಾವಿರಾರು ಜನ ಸೇರಿ ಅನುಮತಿ ಇಲ್ಲದಿದ್ದರೂ ಡಿಜೆ ಹಚ್ಚಿ ಜಿಲ್ಲಾಡಳಿತ ಆದೇಶ ಉಲ್ಲಂಘಿಸಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ, ಆದೇಶಕ್ಕೆ ಬೆಲೆ ಕೊಡದೆ ಅದ್ಧೂರಿ ಮೆರವಣಿಗೆ ಮಾಡಿ ಡಿಜೆ ಹಚ್ಚಿ ಯುವಕರು ನೃತ್ಯ ಮಾಡಿದ್ದಾರೆ.
ನಗರದ ಚಿತ್ತಾಪುರ ರಸ್ತೆಯಿಂದ ಮೆರವಣಿಗೆ ಆರಂಭವಾಗಿ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಅಂಬೇಡ್ಕರ್ ವೃತ್ತ, ಗಾಂಧಿ ವೃತ್ತ, ಚಕ್ರಕಟ್ಟ, ಮೈಲಾಪುರ ಅಗಸಿ ಮಾರ್ಗವಾಗಿ ದೊಡ್ಡ ಕೆರೆಯಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು.
ಜಿಲ್ಲಾಡಳಿತ ಕೇವಲ ಐದು ದಿನ ಗಣೇಶ ಪ್ರತಿಷ್ಠಾಪನೆಗೆ ಅನು ಮತಿ ನೀಡಿತ್ತು. ಆದರೆ, 21 ದಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗುರುವಾರ ವಿಸರ್ಜನೆ ಮಾಡಲಾ ಯಿತು. ಮೆರವಣಿಗೆಯಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಯುವಕರು ಭಾಗಿಯಾಗಿದ್ದಾರೆ.
ಮಹಾಗಣಪತಿಯನ್ನು ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ಮಾಡಲಾಯಿತು. ಸ್ಥಳದಲ್ಲಿ ಪೊಲೀಸರು ಇದ್ದರೂ ಮುಖ ಪ್ರೇಕ್ಷಕರಾಗಿದ್ದರು.
‘ಹಿಂದು ಮಹಾಗಣಪತಿ ವಿಸರ್ಜನೆ ವೇಳೆ ಕೋವಿಡ್ ನಿಯಮ ಮೀರಿ ಡಿಜೆ, ಪರಸ್ಪರ ಅಂತರವಿಲ್ಲದೇ, ಮಾಸ್ಕ್ ಧರಿಸದೇ ಮೆರವಣಿಗೆ ಅಯೋಜಿಸಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.