ಯಾದಗಿರಿ: ‘ಈ ಬಾರಿ ಕೋವಿಡ್ ಕಾರಣದಿಂದ ತಮ್ಮ 67ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ’ ಎಂದು ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.
‘ಮಾರ್ಚ್ 28ರಂದು ತಮ್ಮ ಜನ್ಮದಿನವಿದೆ. ನಾನು ಅಧಿವೇಶನದಲ್ಲಿ ಪಾಲ್ಗೊಂಡಿದ್ದೆ. ನನಗೆ ಗೊತ್ತಿಲ್ಲದೆ ಅಭಿಮಾನಿಗಳು, ಮುಖಂಡರು ಬ್ಯಾನರ್, ಫ್ಲೆಕ್ಸ್ ಹಾಕಿದ್ದಾರೆ. ಆದರೆ, ನಾನು ಜನ್ಮದಿನವನ್ನು ರದ್ದು ಮಾಡಿದ್ದೇನೆ. ಕಳೆದ ವರ್ಷವೂ ಕೊರೊನಾ ಇದ್ದ ಕಾರಣ ಜನ್ಮದಿನ ಆಚರಿಸಿಕೊಂಡಿಲ್ಲ. ಈ ಬಾರಿಯೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನ್ಮದಿನ ಆಚರಿಸಿಕೊಳ್ಳದಿರಲು ನಿರ್ಧಾರ ಮಾಡಿದ್ದೇನೆ. ಹೀಗಾಗಿ ಅಭಿಮಾನಿಗಳು, ಮುಖಂಡರು ಯಾರೂ ನಮ್ಮನ್ನು ಸಂಪರ್ಕಿಸಬಾರದು’ ಎಂದುಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಗುಂಪುಗೂಡದೇ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
‘ಸೋಮವಾರ ನಗರಸಭೆ ಉಪಾಚುನಾವಣೆ ನಿಗದಿಯಾಗಿದೆ. ಹೋಳಿ ಹುಣ್ಣಿಮೆ ಇರುವ ಕಾರಣ ಯಾವುದೇ ಗದ್ದಲ ಗಲಾಟೆಗಳಿಗೆ ಅವಕಾಶ ನೀಡದಂತೆ ಸಂಬಂಧಿಸಿದ ಇಲಾಖೆಗಳು ಕ್ರಮ ಕೈಗೊಳ್ಳಬೇಕು’ ಎಂದರು.
ಯೂಡಾ ಅಧ್ಯಕ್ಷ ಬಸವರಾಜ ಚಂಡರಿಕಿ, ಮುಖಂಡರಾದ ಸಿದ್ದನಗೌಡ ಕಾಡಂನೋರ, ಖಂಡಪ್ಪ ದಾಸನ್, ಮಾರುತಿ ಕಲಾಲ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.