ಯಾದಗಿರಿ: ಯಾದಗಿರಿ, ಶಹಾಪುರ ಹಾಗೂ ಸುರಪುರ ವಲಯದಲ್ಲಿ ಮಂಗಳವಾರ ದಾಳಿ ನಡೆಸಿದ ಅಬಕಾರಿ ಇಲಾಖೆ ವಿಶೇಷ ತಂಡದ ಅಧಿಕಾರಿಗಳು ನಾಲ್ಕು ಪ್ರಕರಣಗಳನ್ನು ದಾಖಸಿಕೊಂಡು ₹29,430 ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ ಎಂದು ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್ ತಿಳಿಸಿದ್ದಾರೆ.
ಶಹಾಪುರ ಉಪ ವಿಭಾಗದ ನಿರೀಕ್ಷಕ ಗೋಪಾಳೆ ಪಂಡಿತ ಅವರ ನೇತೃತ್ವದಲ್ಲಿ ಯಾದಗಿರಿ ವಲಯ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಒಂದು ಪ್ರಕರಣ ದಾಖಲಿಸಿ, ₹10,476 ಮೌಲ್ಯದ 17 ಲೀಟರ್ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಯಾದಗಿರಿ ವಲಯದಲ್ಲಿ ಅಬಕಾರಿ ನಿರೀಕ್ಷಕ ಪ್ರಕಾಶ ಮಾಕೊಂಡ ದಾಳಿ ನಡೆಸಿ, ಒಂದು ಪ್ರಕರಣವನ್ನು ದಾಖಲಿಸಿ, ₹ 8,694 ಮೊತ್ತದ 14ಲೀಟರ್ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಶಹಾಪುರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ನಿರೀಕ್ಷಕ ಅಬೂಬಕರ ಮುಜಾವರ ಅವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಒಂದು ಪ್ರಕರಣ ದಾಖಲಿಸಿ, ₹ 5,292 ಮೊತ್ತದ 8 ಲೀಟರ್ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಸುರಪುರ ವಲಯ ವ್ಯಾಪ್ತಿಯಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಶೈಲ ಒಡೆಯರ ಅವರು ದಾಳಿ ನಡೆಸಿ, ಒಂದು ಪ್ರಕರಣವನ್ನು ದಾಖಲಿಸಿಕೊಂಡು ₹4,968 ಮೊತ್ತದ 8 ಲೀಟರ್ ಮದ್ಯ ಹಾಗೂ ಒಂದು ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕರೊಂದಿಗೆ ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.