ಯಾದಗಿರಿ: ನಗರದ ನೀರು ಸರಬರಾಜು ಶುದ್ಧೀಕರಣ ಘಟಕದಿಂದ ಬರುವ ನೀರನ್ನು ಪೈಪ್ಲೈನ್ ಮುಖಾಂತರ ಲುಂಬಿನಿ ಉದ್ಯಾನವನಕ್ಕೆ ಸರಬರಾಜು ಮಾಡಲು ಪೌರಾಯುಕ್ತರಿಗೆ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರಿಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಸೂಚಿಸಿದರು.
ನಗರದ ಲುಂಬಿನಿ ವನಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಜನರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ನೆಲಹಾಸಿಗೆ, ಪ್ರಾಣಿಗಳ ಚಿತ್ರಗಳು, ಜಂಗಲ್ ಕಟಿಂಗ್, ಮಕ್ಕಳ ಮನರಂಜನೆಯ ಆಟೋಪಕರಣಗಳು, ಬಣ್ಣದ ಹೂವಿನ ಗಿಡಗಳ ಬೆಳೆಸುವಿಕೆಯ ಕಾಮಗಾರಿಗಳನ್ನು ಪರಿಶೀಲಿಸಿದರು.
ಮನರಂಜನೆ ಒದಗಿಸುವ ಅನೇಕ ಆಟಗಳು, ಸಾಹಸ ಕ್ರೀಡೆಗಳು, ವಾಟರ್ ಫಾಲ್ಸ್, ಪ್ರಕೃತಿ ವೈಭವ, ಸುಂದರ ದೃಶ್ಯಾವಳಿ, ಪುಟಿಯುವ ಕಾರಂಜಿ, ವಾಕಿಂಗ್ ಪಾಥ್, ಮನರಂಜನೆ ಜತೆಗೆ ಆಹಾರ ಮಳಿಗೆಯನ್ನೂ ನಿರ್ಮಿಸುವಂಥ ಮತ್ತು ವನದಲ್ಲಿ ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಾಣ, ಚರಂಡಿ ದುರಸ್ತಿ, ಕೆರೆಯ ಸುತ್ತಲಿನ ಪಾದಚಾರಿ ಮಾರ್ಗಕ್ಕೆ ನೆಲಹಾಸಿಗೆ ಹಾಕುವುದು, ಕೆರೆಯಲ್ಲಿ ಬೋಟಿಂಗ್ ಇನ್ನಿತರ ಅಭಿವೃದ್ಧಿಗೆ ಸಂಬಂಧಿಸಿದ ಕಾಮಗಾರಿಗಳ ಮಾಸ್ಟರ್ ಪ್ಲಾನ್ ಮತ್ತು ವಿಸ್ತೃತ ಯೋಜನೆ ವರದಿ, ಕ್ರಿಯಾಯೋಜನೆಗಳನ್ನು ಸಿದ್ದಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸರ್ಕಾರಿ ಬಾಲಕಿಯರ ಬಾಲ ಭವನಕ್ಕೆ ಭೇಟಿ ನೀಡಿ ಅಲ್ಲಿಗೆ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ ಸುತ್ತಲಿನ ಪ್ರದೇಶ ಸ್ವಚ್ಛತೆ ಕಾಪಾಡಲು ಪೌರಾಯುಕ್ತರಿಗೆ ಹಾಗೂ ಆರೋಗ್ಯ ಶಾಖೆಯ ಸಿಬ್ಬಂದಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ನಗರಸಭೆ ಆಯುಕ್ತ ಶರಣಪ್ಪ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.