ADVERTISEMENT

ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಮೇ 2019, 20:39 IST
Last Updated 29 ಮೇ 2019, 20:39 IST
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್   

ಯಾದಗಿರಿ: ಬೆಳಗಾವಿಜಿಲ್ಲೆಯ ಗೋಕಾಕ್‌ ತಾಲ್ಲೂಕಿನಲ್ಲಿ ನಡೆದ ಶಿವಕುಮಾರ ಉಪ್ಪಾರ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಿವಕುಮಾರ ಉಪ್ಪಾರ ಕೊಲೆಯನ್ನು ಪೊಲೀಸರು ಆತ್ಮಹತ್ಯೆ ಎಂದು ಬಿಂಬಿಸುತ್ತಿದ್ದಾರೆ. ಅವರ ಪೋಷಕರಿಗೆ ಒತ್ತಡ ಹಾಕಿ ಆತ್ಮಹತ್ಯೆ ಎಂದು ಹೇಳಿಸಿದ್ದಾರೆ. ಆದರೆ, ಗೋ ರಕ್ಷಣೆ ಮಾಡುತ್ತಿದ್ದ ಶಿವಕುಮಾರ ವಿರುದ್ಧ ಸಂಚು ನಡೆಸಿ ಕೊಲೆ ಮಾಡಲಾಗಿದೆ‘ ಎಂದು ಆರೋಪಿಸಿದರು.

ಶಿವಕುಮಾರ ಕೊಲೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಗೋ ರಕ್ಷಣೆಗೆ ನಿಂತವರನ್ನು ಸರ್ಕಾರ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗೋ ಹತ್ಯೆ ನಿಲ್ಲಿಸಲು ಸೇನೆ ವತಿಯಿಂದ ಸಹಿ ಅಭಿಯಾನ ನಡೆಸಲಾಗುತ್ತಿದೆ. ಗೋ ಹತ್ಯೆ ನಿಂತರೆ ಗೋ ರಕ್ಷಕರನ್ನು ಕಾಪಾಡಿದಂತೆ ಆಗುತ್ತದೆ ಎಂದರು.

ಚುನಾವಣೆ ವೇಳೆ ಹಿಂದುತ್ವ ನೆನಪು:

‘ಬಿಜೆಪಿಗೆ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಹಿಂದುತ್ವ ನೆನಪಾಗುತ್ತದೆ. ಚುನಾವಣೆ ಮುಗಿದ ನಂತರ ಈ ಬಗ್ಗೆ ಸಂಸದರು, ಶಾಸಕರು ಮಾತನಾಡುವುದಿಲ್ಲ. ಕೇವಲ ಟ್ವಿಟ್ ಮಾಡಿ ಮನೆಯಲ್ಲಿ ಕೂತರೆ ಆಗುವುದಿಲ್ಲ' ಎಂದರು.

ಆಂದೋಲ ಸಿದ್ಧಲಿಂಗ ಸ್ವಾಮೀಜಿ, ವಿಜಯಕುಮಾರ ಪಾಟೀಲ, ಶಂಶಾಂಕ್ ನಾಯಕ, ಸೊಪ್ಪಿ ಮಠದ ಚನ್ನವೀರ ಸ್ವಾಮೀಜಿ ಸೇರಿದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.