ಸುರಪುರ: ಶಾರ್ಟ್ಸರ್ಕೀಟ್ನಿಂದ ಬೆಂಕಿ ಅವಘಡ ನಡೆದ ತಾಲ್ಲೂಕಿನ ಜಾಲಿಬೆಂಚಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಬಿ. ಸುಶೀಲಾ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಸಂಜೆ ಬಿರುಗಾಳಿ ಬೀಸಿ, ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ವಿಪರೀತ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹಲವು ಮನೆಗಳಲ್ಲಿ ಬೆಂಕಿ ಹತ್ತಿಕೊಂಡು ರೆಫ್ರಿಜರೇಟರ್, ಟಿವಿ, ಫ್ಯಾನ್, ಮನೆಯ ವೈರ್ಗಳು ಸುಟ್ಟು ಹೋಗಿದ್ದವು. ಭಯದ ವಾತಾವರಣ ನಿರ್ಮಾಣವಾಗಿತ್ತು. ಕೆಲವರಿಗೆ ಗಾಯಗಳಾಗಿದ್ದವು.
ಜಿಲ್ಲಾಧಿಕಾರಿ ಪ್ರತಿ ಮನೆಗೆ ಭೇಟಿ ನೀಡಿ, ಹಾನಿ ಬಗ್ಗೆ ನಿವಾಸಿಗಳಿಂದ ಮಾಹಿತಿ ಪಡೆದುಕೊಂಡರು. ಭಯ ಪಡುವುದು ಬೇಡ ನಿಮ್ಮ ಜೊತೆ ನಾವಿದ್ದೇವೆ ಎಂದು ಅಭಯ ನೀಡಿದರು.
‘ಕಂದಾಯ ಮತ್ತು ಜೆಸ್ಕಾಂ ಇಲಾಖೆಯವರು ಜಂಟಿ ಸಮೀಕ್ಷೆ ಮಾಡಿ ಹಾನಿಯಾದ ಬಗ್ಗೆ ವರದಿ ನೀಡಬೇಕು. ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರಕ್ಕೆ ಯತ್ನಿಸುತ್ತೇನೆ’ ಎಂದು ತಿಳಿಸಿದರು.
ಘಟನೆಯಲ್ಲಿ ಗಾಯಗೊಂಡ ಮತ್ತು ಭಯಭೀತರಾದವರಿಗೆ ಸೂಕ್ತ ಚಿಕಿತ್ಸೆ ನೀಡುವ ಜೊತೆಗೆ ಆತ್ಮಸ್ಥೈರ್ಯ ತುಂಬಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಹಂಪಣ್ಣ ಸಜ್ಜನ್, ತಹಶೀಲ್ದಾರ್ ಎಚ್.ಎ. ಸರಕಾವಸ್, ತಾಪಂ ಇಒ ಬಸವರಾಜ ಸಜ್ಜನ್, ಪಿಐ ಆನಂದ ವಾಗ್ಮೋಡೆ, ಸಂತೋಷ ನಾಯಕ, ಕುರುಬ ಸಮಾಜದ ಅಧ್ಯಕ್ಷ ಕಾಳಪ್ಪ ಕವಾತಿ, ಜೆಸ್ಕಾಂ ಎಇಇ ರಫೀಕ್, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.