ಯಾದಗಿರಿ: ₹56 ಕೋಟಿ ವೆಚ್ಚದಲ್ಲಿ ಯಾದಗಿರಿ ಸಮೀಪದ ಮುದ್ನಾಳ ಬಳಿ ಸಕಲ ಸೌಕರ್ಯಗಳನ್ನು ಒಳಗೊಂಡು ನಿರ್ಮಿಸಲಾಗಿರುವ 300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಉದ್ಘಾಟಿಸಿದರು.
ಮುದ್ನಾಳ ಬಳಿ ನಿರ್ಮಿಸಲಾಗಿರುವ ನೂತನ ಜಿಲ್ಲಾ ಆಸ್ಪತ್ರೆಯನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಿದರು. ಸಚಿವರು, ಜನಪ್ರತಿನಿಧಿಗಳು ಹಾಗೂ ಅಸಂಖ್ಯಾತ ಜನರು ಸಾಕ್ಷಿಯಾದರು.
ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹೆಸರಿನಲ್ಲಿ 150 ಎಂಬಿಬಿಎಸ್ ಸೀಟುಗಳ ಹೊಸ ವೈದ್ಯಕೀಯ ಕಾಲೇಜು ಸ್ವಾಯತ್ತ ಸಂಸ್ಥೆಯ ಸ್ಥಾನಮಾನದೊಂದಿಗೆ ಸ್ಥಾಪಿತವಾಗಲಿದೆ. ಯಿಮ್ಸ್ ಕಟ್ಟಡದ ಕಾಮಗಾರಿಯನ್ನು 24 ತಿಂಗಳೊಳಗೆ ಮುಗಿಸಲು ಸರ್ಕಾರ ಗುತ್ತಿಗೆ ಪಡೆದಿರುವ ಹೈದರಾಬಾದ್ನ ಕೆಎಂವಿ ಪ್ರೈವೆಟ್ ಪ್ರೊಜೆಕ್ಟ್ ಲಿಮಿಟೆಡ್ಗೆ ಸೂಚಿಸಲಾಗಿದೆ.
ಹೆಲಿಕಾಪ್ಟರ್ನಲ್ಲಿ ಬಂದ ಸಿಎಂ: ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ, ಯಿಮ್ಸ್ಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಮಧ್ಯಾಹ್ನ ನಗರದ ಕ್ರೀಡಾಂಗಣಕ್ಕೆ ಹೆಲಿಕಾಪ್ಟರ್ನಲ್ಲಿಬಂದಿಳಿದರು.
ಸಿಎಂ ಅವರೊಂದಿಗೆ ಹೆಲಿಕಾಪ್ಟರ್ನಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಡಾ.ಸುಧಾಕರ್, ಪ್ರಭು ಚವ್ಹಾಣ ಆಗಮಿಸಿದ್ದರು.
ಸಿಎಂ ಅವರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು. ಈ ವೇಳೆ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ, ನರಸಿಂಹ ನಾಯಕ(ರಾಜೂಗೌಡ), ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರು, ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಜನಪ್ರನಿಧಿಗಳು, ಬಿಜೆಪಿ ಮುಖಂಡರು ಇದ್ದರು.
ನಂತರ ಸಿಎಂ ಯಡಿಯೂರಪ್ಪ ಅವರು ಗೌರವ ವಂದನೆ ಸ್ವೀಕರಿಸಿ ಕಾರ್ಯಕ್ರಮದ ಸ್ಥಳಕ್ಕೆತೆರಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.