ADVERTISEMENT

ವೈದ್ಯರ ನಿರ್ಲಕ್ಷ್ಯ, ಬಾಲಕನ ಜೀವಕ್ಕೆ ಅಪಾಯ: ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:04 IST
Last Updated 28 ಮೇ 2025, 15:04 IST
ಶಹಾಪುರ ನಗರದಲ್ಲಿರುವ ಖಾಸಗಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು
ಶಹಾಪುರ ನಗರದಲ್ಲಿರುವ ಖಾಸಗಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು    

ಯಾದಗಿರಿ: ಜಿಲ್ಲೆಯ ಶಹಾಪುರ ನಗರದಲ್ಲಿರುವ ಖಾಸಗಿ ಮಲ್ಟಿಸ್ಟೆಷಾಲಿಟಿ ಆಸ್ಪತ್ರೆಯ ವೈದ್ಯರು 10 ವರ್ಷದ ಬಾಲಕನಿಗೆ ಗಂಟಲು ನೋವಿಗೆ ಕೊಟ್ಟಿರುವ ಚಿಕಿತ್ಸೆ ರಿಯಾಕ್ಷನ್ ಆಗಿರುವುದರಿಂದ ಈ ವೈದ್ಯನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ಆಗ್ರಹಿಸಿದೆ.

ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದ ದಸಂಸ ಕಾರ್ಯಕರ್ತರು, ‘ರಾಯಚೂರು ಜಿಲ್ಲೆಯ ದೇವದುರ್ಗದ 10 ವರ್ಷ ಬಾಲಕ ಮೊಹ್ಮದ್‌ಸಾದ್ ಮುಬಾರಕ್‌ ಅಹ್ಮದ್‌ನನ್ನು ಗಂಟಲು ನೋವಿಗಾಗಿ ಶಹಾಪುರ ನಗರದ ದಿ.ಅಚ್ಚಪ್ಪಗೌಡ ಸುಬೇದಾರ ಸ್ಮಾರಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಬಳಿ ಪೋಷಕರು ಮೇ 6 ರಂದು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ವೈದ್ಯರು ನೀಡಿದ ಔಷಧ ರಿಯಾಕ್ಷನ್ ಆಗಿ ಬಾಲಕ ಸಂಕಷ್ಟದಲ್ಲಿದ್ದು, ಈಗ ರಾಯಚೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ತಿಳಿಸಿದ್ದಾರೆ.

ಯಾವುದೋ ಚಿಕಿತ್ಸೆ ನೀಡಿ ಅವರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸಿ, ನಕಲಿ ವೈದ್ಯಕೀಯ ವೃತ್ತಿ ಮಾಡುತ್ತಿರುವ ಇಂತಹ ವೈದ್ಯರಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಬಾಲಕನ ಆಸ್ಪತ್ರೆಯ ವೆಚ್ಚ ಭರಿಸುವಂತೆ ಹಾಗೂ ವೈದ್ಯರು ಮಾಡಿರುವ ತಪ್ಪಿಗೆ ₹5 ಲಕ್ಷ ದಂಡ ಭರಿಸಲು ಕ್ರಮ ವಹಿಸಿ, ಈ ವೈದ್ಯನ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ADVERTISEMENT

ವೈದ್ಯನ ಮೇಲೆ ಕ್ರಮಕೈಗೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ತಮ್ಮ ಜಿಲ್ಲಾಸ್ಪತ್ರೆಯ ಮುಂದೆ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮೋಹನರಾಜ್ ಗೌಡ ಮನವಿ ಸಲ್ಲಿಸಿದರು. ಶಹಾಪುರ ತಾಲ್ಲೂಕು ಸಂಚಾಲಕ ಹನುಮಂತ ಗಬ್ಬೂರ, ಭೀಮರಾಯ ಬಡಿಗೇರ, ಕ್ರಾಂತಿಕುಮಾರ ರಾಯಚೂರಕರ, ಆಂಜಿನೇಯ ಟೊಣ್ಣೂರ, ಅರುಣಕುಮಾರ ನಾಟೇಕರ್, ಹನುಮಂತ ಶೆಟಿಗೇರಿ, ಮಬಾರಕರ್ ದೇವದುರ್ಗ, ಭೀಮು ಹುಲಿಮನಿ, ಮಲ್ಲಿಕಾರ್ಜುನ ಕಟ್ಟಿಮನಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.