ಯಾದಗಿರಿ: ಸ್ವಾತಂತ್ರ್ಯ ಹೋರಾಟಗಾರ ದಿ.ಕೂಲೂರ ಮಲ್ಲಪ್ಪ ಸ್ಮಾರಕ ಭವನ ನಿರ್ಮಾಣಕ್ಕೆ ನೀಲನಕ್ಷೆನ್ನು ತಯಾರಿಸಿದರೆ ಅಗತ್ಯ ಅನುದಾನ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಭರವಸೆ ನೀಡಿದರು.
ನಗರದ ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಕೂಲೂರು ಮಲ್ಲಪ್ಪ ಸ್ಮಾರಕ ಟ್ರಸ್ಟ್ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಕಲ್ಯಾಣ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾಗಿದ್ದ ದಿ.ಕೂಲೂರ ಮಲ್ಲಪ್ಪ ಅವರ ಸ್ಮಾರಕ ಭವನಕ್ಕೆ ರಾಜ್ಯ ಸರ್ಕಾರ ಈಗಾಗಲೇ 6114 ಚ.ಮೀ. ಉಚಿತ ನಿವೇಶನ ನೀಡಿದೆ. ಇದು ನಮ್ಮ ಜಿಲ್ಲೆಗೆ ಸರ್ಕಾರ ನೀಡಿದ ದೊಡ್ಡ ಕಾಣಿಕೆ’ ಎಂದರು.
‘ಕೂಲೂರ ಮಲ್ಲಪ್ಪ ಅವರು ಅಂದಿನ ಪ್ರಧಾನಮಂತ್ರಿಗಳಾಗಿದ್ದ ನೆಹರೂ ಮತ್ತು ಇಂದಿರಾ ಗಾಂಧಿ ಅವರ ಆಪ್ತರಾಗಿದ್ದರು. ಮುಖ್ಯಮಂತ್ರಿಯಾಗುವ ಅವಕಾಶ ಅವರಿಗಿತ್ತು. ಆದರೆ, ಅವರು ಅದನ್ನು ಒಪ್ಪದೆ ಡಿ.ದೇವರಾಜ ಅರಸರನ್ನು ಮುಖ್ಯಮಂತ್ರಿ ಮಾಡಿದ್ದರು’ ಎಂದು ಸ್ಮರಿಸಿದರು.
ಸ್ಮಾರಕ ಟ್ರಸ್ಟ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಸಾಯಿಬಣ್ಣ ಕೆಂಗೂರಿ ಮತ್ತು ಶರಣಪ್ಪಗೌಡ ಕೌಳೂರ, ಸಿದ್ದಣ್ಣಗೌಡ ಕಾಡಮನೋರ, ಚನ್ನಕೇಶವಗೌಡ ಬಾಣತಿಹಾಳ, ಸುರೇಶ ಮಡ್ಡಿ, ಸಲೀಂ ಹುಂಡೇಕಲ್, ಪ್ರಭುಲಿಂಗ ವಾರದ, ಮಲ್ಲಯ್ಯ ಕಸಬಿ, ಮಲ್ಲಣ್ಣ ಐಕೂರ, ಹಣಮಂತ್ರಾಯ ತೆಕರಾಳ, ನಿಂಗು ಜಡಿ, ಸಿದ್ದು ಪೂಜಾರಿ, ವಿಜಯ ಬೆಳಗುಂದಿ, ಭೀಮು ಪೂಜಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.