ಯಾದಗಿರಿ: ಕೋವಿಡ್ ಕಾರಣದಿಂದ ಶುಕ್ರವಾರ ನಡೆಯುವ ಈದ್ ಮಿಲಾದ್ ಅನ್ನು ಸರಳವಾಗಿ ಆಚರಣೆಗೆ ಮಾಡಲು ಮುಸ್ಲಿಂ ಸಮುದಾಯದ ಮುಖಂಡರು ನಿರ್ಧಾರ ಮಾಡಿದ್ದಾರೆ.
ಪ್ರವಾದಿ ಮಹಮದ್ ಪೈಗಂಬರ್ ಹುಟ್ಟಿದ ದಿನವನ್ನೇ ಈದ್ ಮಿಲಾದ್ ಆಗಿ ಮುಸ್ಲಿಮರು ಆಚರಣೆ ಮಾಡಿಕೊಂಡು ಬರುತ್ತಿದ್ದಾರೆ. ಕಳೆದ ಬಾರಿಯಂತೆ ಜೂಲೂಸ್ (ಮೆರವಣಿಗೆ) ಇಲ್ಲದೆ ಸರಳವಾಗಿ ಮನೆಯಲ್ಲಿ ಆಚರಿಸುತ್ತೇವೆ ಎಂದು ಮುಖಂಡರು ತಿಳಿಸಿದ್ದಾರೆ.
ಕೋವಿಡ್ ಸಂಖ್ಯೆ ಇಳಿಕೆಯಾಗಿದ್ದರೂ ಕೋವಿಡ್ ಭಯ ಇನ್ನೂ ದೂರವಾಗಿಲ್ಲ. ಹೀಗಾಗಿ ಹಬ್ಬದ ಸಂಭ್ರಮವೂ ಅಷ್ಟಾಗಿ ಕಂಡು ಬಂದಿಲ್ಲ. ಅಲ್ಲದೆ ಇದು ಮನೆಯಲ್ಲಿ ಊಟ ತಯಾರಿಸಿ ಮಾಡುವ ಹಬ್ಬವಾಗಿದೆ.
‘ಪ್ರವಾದಿಯವರು ನಡೆದ ಮಾರ್ಗದಲ್ಲಿ ನಡೆಯಲು ಇದು ಕೂಡ ಒಂದು ಕಾರಣವಾಗಿದೆ. ಹೀಗಾಗಿ ಅವರು ಅನುಸರಿಸಿದ ದಾರಿಯನ್ನು ಹುಡುಕಲು ಇದು ಪ್ರೇರೆಪಿಸುತ್ತದೆ. ಸಮೀಪ ಬಂಧುಗಳನ್ನು ಕರೆಯಿಸಿ ಊಟ, ಉಪಚಾರ ನಡೆಯುತ್ತದೆ. ಇದು ಹೆಚ್ಚು ವಿಜ್ರಂಭಣೆಯಿಂದ ಮಾಡಲು ಆಗುವುದಿಲ್ಲ’ ಎಂದು ಮುಸ್ಲಿಂ ಯುವ ಮುಖಂಡ ಸಾಜೀದ್ ಸೈಯದ್ ಹೈಯಾತ್ ಹೇಳುತ್ತಾರೆ.
ವಿಶೇಷ ಕಾರ್ಯಕ್ರಮ:
ಮಿಲಾದ್ ಆಂಗವಾಗಿ ಬಡವರಿಗೆ ಊಟೋಪಚಾರ ನೀಡಲಾಗುತ್ತಿದೆ. ಜೊತೆಗೆ ಸಿಹಿ ಹಂಚಲಾಗುತ್ತಿದೆ. ಕೆಲ ಯುವಕರು ರಕ್ತದಾನ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಬ್ರೆಡ್, ಹಣ್ಣು, ಬಿಸ್ಕತ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರವಾದಿಯವರ ಕುರಿತಾದ ಪುಸ್ತಕವನ್ನು ವಿತರಣೆ ಮಾಡಲಾಗುತ್ತಿದೆ.
***
ಈ ಬಾರಿ ಮಿಲಾದ್ ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಯಾವುದೇ ಬಹಿರಂಗ ಸಭೆ ಇಲ್ಲ. ಮೆರವಣಿಗೆಯೂ ನಡೆಸುವುದಿಲ್ಲ
ಮನ್ಸೂರ ಅಹ್ಮದ್ ಅಫಘಾನ, ಮುಸ್ಲಿಂ ಮುಖಂಡ
***
ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಅಲ್ಲದೆ ಪ್ರವಾದಿ ಕುರಿತಾದ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ
ಅಸಾದ ಬಿನ್ ಬಾದರ್ ಚೌಸ್, ಮುಸ್ಲಿಂ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.