ಕೆಂಭಾವಿ: ‘ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಹೆಚ್ಚಿನ ಅಪಾಯ ಎದುರಾಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಉಳಿಸಿ ಬೆಳೆಸಬೇಕು‘ ಎಂದು ಪ್ರಾಥಮಿಕ ಕೃಷಿ ಪತ್ತನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ದೇಸಾಯಿ ಹದನೂರ ಹೇಳಿದರು.
ಪಟ್ಟಣ ಸಮೀಪದ ಮಲ್ಲಾ (ಬಿ) ಗ್ರಾಮದಲ್ಲಿ ಬುಧವಾರ ಬಾಲಕರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ತಿಪ್ಪಾರಡ್ಡಿ ಮಾಲಿ ಪಾಟೀಲ ಮಾತನಾಡಿ, ‘ಪ್ರತಿಯೊಬ್ಬರೂ ಗಿಡ ಮರಗಳನ್ನು ಬೆಳೆಸಬೇಕಾಗಿದೆ. ಸುರಪುರ ತಾಲ್ಲೂಕಿನ 22 ವಸತಿ ನಿಲಯಗಳಲ್ಲಿ ಈಗಾಗಲೇ 16 ವಸತಿ ನಿಲಯಗಳಲ್ಲಿ 1300 ಸಸಿಗಳನ್ನು ನೆಡಲಾಗಿದೆ. ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪರಿಸರದ ಉತ್ತಮ ವಾತಾವರಣ ದೊರೆಯುವುದಕ್ಕೆ ಸಾಧ್ಯವಾಗುತ್ತದೆ. ನಮ್ಮ ಇಲಾಖೆಯಿಂದ ಸಸಿ ನೆಡುವ ಇಂತಹ ಒಳ್ಳೆಯ ಕಾರ್ಯ ಮಾಡಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಗಿಡಗಳನ್ನು ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ಮಾಡಲಾಗುವುದು‘ ಎಂದು ಹೇಳಿದರು.
ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಎಸ್.ಎಸ್.ತಳವಾರ ಮಾತನಾಡಿ, ಪರಿಸರವನ್ನು ತಾಯಿಯಂತೆ ರಕ್ಷಣೆ ಮಾಡುವ ಮನೋಭಾವವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಅರಣ್ಯಾಧಿಕಾರಿ ಗೀರಿಶ ಕರ್ನಾಳ, ಶಿವಶಂಕ್ರಪ್ಪ, ಮಲ್ಲಪ್ಪ ಪೂಜಾರಿ, ಶಿವರಾಜ ಹೆಳವರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುತ್ರಪ್ಪಗೌಡ ಬಿರಾದಾರ, ವಸತಿ ನಿಲಯದ ಮೇಲ್ವಿಚಾರಕ ನಾಗರಾಜ, ಹನುಮೇಗೌಡ, ಜಗದ್ಗುರು ಹಿರೇಮಠ, ನಾಗೇಶ, ರಾಮಲಿಂಗಪ್ಪ ನಾಯಕ, ಯಂಕಣ್ಣ ದೊರೆ, ಮೆಹತಾಬ್, ಮಲ್ಲಿಕಾರ್ಜುನ, ವೆಂಕಟೇಶ, ಶ್ರೀಮತಿ ರೂಪಾ, ನೀಲಮ್ಮ, ಸೇರಿದಂತೆ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.