ADVERTISEMENT

ರೈತರು ನಿಜವಾದ ತ್ಯಾಗ ಜೀವಿಗಳು: ರೈತ ಮುಖಂಡ ಮಲ್ಲಿಕಾರ್ಜುನ

ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 10:35 IST
Last Updated 16 ಡಿಸೆಂಬರ್ 2019, 10:35 IST
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು
ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು   

ಯಾದಗಿರಿ: ‘ರೈತರು ತಮ್ಮ ಜೀವನವನ್ನು ಪರರ ಹಿತಕ್ಕಾಗಿಯೇ ಮುಡುಪಾಗಿಟ್ಟಿರುತ್ತಾರೆ. ಅವರು ಎಂದಿಗೂ ತಮ್ಮ ಸ್ವಂತ ಜೀವನಕ್ಕಾಗಿ ಯೋಚಿಸುವುದಿಲ್ಲ. ನಮ್ಮ ಕಣ್ಣ ಮುಂದೆ ಇರುವ ನಿಜವಾದ ತ್ಯಾಗಜೀವಿಗಳೆಂದರೆ ರೈತರು’ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಹೇಳಿದರು.

ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೈತರು ಇಂದು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಕಷ್ಟ ಪಡಬೇಕಾದ ಸ್ಥಿತಿ ಇರುವುದರಿಂದ ಅವರ ಪರವಾಗಿ ಧ್ವನಿ ಎತ್ತಬೇಕಾಗಿದೆ. ಅದಕ್ಕಾಗಿ ಪ್ರತಿಯೊಂದು
ಗ್ರಾಮಗಳಲ್ಲಿ ರೈತ ಸಂಘಟನೆ ಬಲಿಷ್ಠವಾಗುವುದರಿಂದ ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಅವಕಾಶ ಸಿಗಲಿದೆ’ ಎಂದರು.

ADVERTISEMENT

ಜಿಲ್ಲಾಧ್ಯಕ್ಷ ಶರಣು ಮಂದರವಾಡ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ರೈತರ ಶೋಷಣೆ ನಡೆಯುತ್ತಿದೆ. ರೈತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಅವರ ಪರವಾಗಿ ಹೋರಾಟ ಮಾಡಬೇಕು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ’ ಎಂದರು.

ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಚಂದ್ರಕಲಾ ಭಾಗೂರ, ತಾಲ್ಲೂಕು ಅಧ್ಯಕ್ಷ ಮಲ್ಲಣ್ಣ ನೀಲಹಳ್ಳಿ, ಎಪಿಎಂಸಿ ಸದಸ್ಯ ಅಯ್ಯಣ್ಣ ಜೇರಬಂಡಿ, ಫಕೀರ್‌ ಅಹ್ಮದ್, ಸಾಯಿಬಣ್ಣ ದಿಡ್ಡಿಮನಿ, ಬಸವಲಿಂಗಪ್ಪ ಕಲಾಲ, ಯಲ್ಲಪ್ಪ ನಾಯ್ಕೋಡಿ, ಹಣಮಂತ ಪೂಜಾರಿ ಇದ್ದರು.

ಪದಾಧಿಕಾರಿಗಳ ಆಯ್ಕೆ: ಸಿದ್ಧಲಿಂಗರೆಡ್ಡಿ ಪೊಲೀಸ್‌ ಪಾಟೀಲ (ಗೌರವಾಧ್ಯಕ್ಷ), ಭೀಮಪ್ಪ ನಾಯ್ಕೋಡಿ (ಅಧ್ಯಕ್ಷ), ಯಲ್ಲಪ್ಪ ಸಾಧು (ಉಪಾಧ್ಯಕ್ಷ), ಮಲ್ಲಿಕಾರ್ಜುನ ನಾಯ್ಕೋಡಿ (ಕಾರ್ಯದರ್ಶಿ), ಸಾಬಯ್ಯ ಕಲಾಲ (ಸಹ ಕಾರ್ಯದರ್ಶಿ), ಬಾಬು ಮುಲ್ಲಾ (ಖಜಾಂಚಿ), ಹಣಮಂತ ದೊರೆ (ಸಂಘಟನಾ ಕಾರ್ಯದರ್ಶಿ), ಮಲ್ಲಪ್ಪ ಪೂಜಾರಿ (ಸಹ ಸಂಘಟನಾಕಾರ್ಯದರ್ಶಿ), ಯಂಕಪ್ಪ ಗೌಂಡಿ (ಸಹ ಖಜಾಂಚಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.