ADVERTISEMENT

ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 13:35 IST
Last Updated 9 ಫೆಬ್ರುವರಿ 2021, 13:35 IST
ಸುರಪುರ ತಾಲ್ಲೂಕಿನ ರೈತರ ಪಂಪ್‍ಸೆಟ್‍ಗಳಿಗೆ ದಿನಕ್ಕೆ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಜೆಸ್ಕಾಂ ಅಧಿಕಾರಿಗೆ ರೈತರು ಮಂಗಳವಾರ ಮನವಿ ಸಲ್ಲಿಸಿದರು
ಸುರಪುರ ತಾಲ್ಲೂಕಿನ ರೈತರ ಪಂಪ್‍ಸೆಟ್‍ಗಳಿಗೆ ದಿನಕ್ಕೆ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಜೆಸ್ಕಾಂ ಅಧಿಕಾರಿಗೆ ರೈತರು ಮಂಗಳವಾರ ಮನವಿ ಸಲ್ಲಿಸಿದರು   

ಸುರಪುರ: ತಾಲ್ಲೂಕಿನ ರೈತರಿಗೆ ದಿನಕ್ಕೆ ಕನಿಷ್ಠ 15 ತಾಸು ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಜೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಸಾಹು ಹಯ್ಯಾಳ ಮಾತನಾಡಿ, ‘ಸದ್ಯ ರೈತರ ಪಂಪ್‍ಸೆಟ್‍ಗಳಿಗೆ ದಿನಕ್ಕೆ 7 ತಾಸು ಮಾತ್ರ ವಿದ್ಯುತ್ ಒದಗಿಸಲಾಗುತ್ತಿದೆ. ವಿವಿಧ ಕಾರಣಗಳಿಗಾಗಿ ಅದರಲ್ಲಿ 2 ತಾಸು ವಿದ್ಯುತ್ ಪೂರೈಕೆ ಇರುವುದಿಲ್ಲ. ಇಷ್ಟು ವಿದ್ಯುತ್ ಬಳಸಿ ರೈತರು ತಮ್ಮ ಬೆಳೆ ಉಳಿಸಿಕೊಳ್ಳುವುದು ಅಸಾಧ್ಯ’ ಎಂದರು.

‘ಮುಂದೆ ಬೇಸಿಗೆ ಆರಂಭವಾಗುತ್ತದೆ. ಜಮೀನು ಶೀಘ್ರದಲ್ಲಿ ಹಸಿ ಆರುತ್ತದೆ. ಹೀಗಾಗಿ ಬೆಳೆಗಳು ಒಣಗಿ ರೈತ ಅಪಾರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಕೆಂಭಾವಿ ಭಾಗದ ರೈತರಿಗೆ ಕೆಂಭಾವಿ ಫೀಡರ್‌ನ ಬದಲು ತಿಪ್ಪನಟಗಿ ಫೀಡರ್‌ನಿಂದ ವಿದ್ಯುತ್ ಪೂರೈಸಬೇಕು. ಇದರಿಂದ ಈ ಭಾಗದ ಹೆಗ್ಗನದೊಡ್ಡಿ, ಗೋಡ್ರಿಹಾಳ ರೈತರಿಗೂ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.

ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಈರಣ್ಣ ಅಳ್ಳಿಚಂಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಎಚ್.ಆರ್. ಬಡಿಗೇರ ಕೇಂಭಾವಿ, ದೇವೇಂದ್ರ ಬನಗುಂಡಿ ಹಾಗೂ ಮಂಜುನಾಥ ಧರಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.