ADVERTISEMENT

ಪ್ರವಾಹ ಭೀತಿ: ಸೂಕ್ತ ಬಂದೋಬಸ್ತ್‌ ನಿಯೋಜನೆ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಹೇಳಿಕೆ‌

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 14:33 IST
Last Updated 3 ಆಗಸ್ಟ್ 2019, 14:33 IST
ಋಷಿಕೇಶ್ ಭಗವಾನ್‌
ಋಷಿಕೇಶ್ ಭಗವಾನ್‌   

‌ಯಾದಗಿರಿ: ನಾರಾಯಣಪುರ ಡ್ಯಾಂನಿಂದ ಹೆಚ್ಚುವರಿ ನೀರನ್ನು ಹರಿಸುವುದರಿಂದ ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಬಳಿ ಪ್ರವಾಹ ಸ್ಥಿತಿ ಬಂದಿದೆ. ಅಲ್ಲಿ ಈಗಾಗಲೇ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಹೇಳಿದರು.

ಶನಿವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಜಿಲ್ಲೆಯ ನೀಲಕಂಠರಾಯನಗಡ್ಡಿ ಬಳಿ ಸೇತುವೆ ನಿರ್ಮಿಸಿರುವುದರಿಂದ ಅಲ್ಲಿ ಪ್ರವಾಹ ಸಮಸ್ಯೆ ಇಲ್ಲ. ಕೊಳ್ಳೂರ ಬಳಿ ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದ್ದು, ಈಗಾಗಲೇ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದರು.

ಭಾರಿ ವಾಹನಗಳು ಸೇತುವೆ ಮೇಲೆ ತೆರಳದಂತೆ ರಸ್ತೆ ಸಂಚಾರ ಸ್ಥಗಿತಗೊಳಿಸಿ ಬ್ಯಾರಿಕೇಡ್‌ ಅಳವಡಿಸಲಾಗಿದೆ. 2.25 ಲಕ್ಷ ಕ್ಯುಸೆಕ್ ನೀರು ಹೆಚ್ಚುರಿಯಾಗಿ ಹರಿದರೆ ಮಾತ್ರ ಕೊಳ್ಳೂರ ಸೇತುವೆ ಮೇಲೆ ನೀರು ಹರಿಯಲಿದೆ. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಲೈಫ್ ಜಾಕೆಟ್‌, ಅಗ್ನಿ ಶಾಮಕ ದಳ ಮತ್ತಿತರ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT

ಸೇತುವೆ ಮೇಲೆ ಮೀನು ಹಿಡಿಯುವುದು ಕಂಡು ಬಂದಿದೆ. ಸೇತುವೆ ಮೇಲೆ ಮೀನುಗಾರಿಕೆ ಮಾಡುವುದು ಅಪರಾಧ. ಹೀಗಾಗಿ ಇಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಲಾಗುವುದು. ಛಾಯಾ ಭಗವತಿ ದೇಗುಲದ ಬಳಿ ನೀರು ಹರಿಯುವುದರಿಂದ ನದಿಗೆ ಇಳಿಯುವ ಪ್ರಯತ್ನ ಯಾರೂ ಮಾಡಬಾರದು. ಆಯಾ ಭಾಗದ ಪಿಎಸ್‌ಐ ಮತ್ತು ಬೀಟ್‌ ಪೊಲೀಸರು ಭದ್ರತೆ ಕೈಗೊಳ್ಳಲಿದ್ದಾರೆ. ಯಾರೂ ಕೂಡ ಸೇತುವೆ ಬಳಿ ಹೋಗಿ ಸಹಾಯ ಮಾಡುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.