
ವಡಗೇರಾ: ‘ದೇಹದ ಅಂಗಗಳಲ್ಲಿ ಕಣ್ಣುಗಳು ಪ್ರಮುಖವಾದವು, ಅವುಗಳ ಸಂರಕ್ಷಣೆ ಅತ್ಯಗತ್ಯವಾಗಿದೆ’ ಎಂದು ಸಂಗಮದ ಸಂಗಮನಾಥ ದೇವಾಲಯದ ಪಿಠಾಧಿಪತಿ ಕರುಣೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಿಪೇಯ, ಮಾಜಿ ಸಚಿವ ದಿ.ವಿಶ್ವನಾಥರಡ್ಡಿ ಮುದ್ನಾಳ, ಮಾಜಿ ಶಾಸಕ ದಿ.ವೀರಬಸವಂತರಡ್ಡಿ ಮುದ್ನಾಳ ಜಯಂತಿ ನಿಮಿತ್ತ ಯಾದಗಿರಿಯ ವಿಬಿಆರ್ ಆಸ್ಪತ್ರೆ, ಯಾದಗಿರಿ ಲಯನ್ಸ್ ಕ್ಲಬ್, ಮಹೆಬೂಬ ನಗರದ ಲಯನ್ಸ್ ಆಸ್ಪತ್ರೆ ಆಶ್ರಯದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ, ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಶರೀರದ ರಕ್ಷಣೆ ಅತಿಮುಖ್ಯ. ಅದರೊಂದಿಗೆ ಅಂಗಾಂಗಳು ಅಮೂಲ್ಯವಾಗಿವೆ. ಆದರೆ ಯುವಜನರು ದುಶ್ಚಟಗಳಿಗೆ ಬಲಿಯಾಗಿ ದೇಹದ ಅಂಗಾಂಗಳನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ’ ಎಂದು ವಿಷಾದ ವ್ಯಕ್ತಪಡಿಸಿದರು.
ಕೋಡಾಲ್ದ ಪಂಚಮ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ‘ಕಳಂಕರಹಿತ, ದೇಶ ಕಂಡ ಅಪ್ರತಿಮ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಅಣ್ವಸ್ತ್ರ ಪರೀಕ್ಷೆಯ ಮೂಲಕ ಜಗತ್ತಿನ ಗಮನ ಸೆಳೆದವರು. ರಾಜಕಾರಣಿಗಳಾದ ದಿ. ವಿಶ್ವನಾಥರಡ್ಡಿ ಮುದ್ನಾಳ ಹಾಗೂ ದಿ. ಡಾ.ವೀರಬಸವಂತರಡ್ಡಿ ಮುದ್ನಾಳ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.
ಯಾದಗಿರಿಯ ಲಯನ್ಸ್ ಕ್ಲಬ್ ಅಧ್ಯಕ್ಷ ಭೀಮಣ್ಣಗೌಡ ಖಾತ್ನಾಳ ಮಾತನಾಡಿ, ‘ಕ್ಲಬ್ನ ಸದಸ್ಯರ ಮನೆಯಲ್ಲಿ ಶುಭ ಕಾರ್ಯಕ್ರಮವಿದ್ದರೆ, ಸಾರ್ವಜನಿಕರಿಗೆ ಅನುಕೂಲಕ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನಿರ್ಣಯಿಸಲಾಗಿತ್ತು. ಹೀಗಾಗಿ ಉಚಿಚ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ’ ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷ ಸಿದ್ದಪ್ಪ ತಮ್ಮಣ್ಣೋರ, ತಾಲ್ಲೂಕು ವೈದ್ಯಾಧಿಕಾರಿ ಜಗನ್ನಾಥರೆಡ್ಡಿ, ಡಾ.ಜಗದೀಶ ಹಿರೇಮಠ, ಬಸವರಾಜ ಚಂಡ್ರಿಕಿ, ವೆಂಕಟರಡ್ಡಿ ತಂಗಡಗಿ, ಸಿದ್ರಾಮರಡ್ಡಿ ತಿಪ್ಪರಡ್ಡಿ, ಶಿವಪುತ್ರರಡ್ಡಿ, ಡಾ.ಅಮೋಘ, ಡಾ.ನಾಗರಾಜ, ಶಿವಕುಮಾರ ಕೊಂಕಲ್, ಮಹ್ಮದ್ ಖುರೇಷಿ, ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮಲ್ಲಯ್ಯಸ್ವಾಮಿ ಹಿರೇಮಠ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.